ADVERTISEMENT

ಮತದಾನ ಪ್ರಕ್ರಿಯೆಗೆ ಸಿಬ್ಬಂದಿ ಸಜ್ಜು

​ಪ್ರಜಾವಾಣಿ ವಾರ್ತೆ
Published 11 ಮೇ 2018, 19:33 IST
Last Updated 11 ಮೇ 2018, 19:33 IST
ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಮಹಿಳೆಯರು ಮತಯಂತ್ರ ಪಡೆಯಲು ಮಕ್ಕಳನ್ನು ಎತ್ತಿಕೊಂಡು ಜಯನಗರದ ಮಸ್ಟರಿಂಗ್ ಕೇಂದ್ರಕ್ಕೆ ಬಂದಿದ್ದರು
ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಮಹಿಳೆಯರು ಮತಯಂತ್ರ ಪಡೆಯಲು ಮಕ್ಕಳನ್ನು ಎತ್ತಿಕೊಂಡು ಜಯನಗರದ ಮಸ್ಟರಿಂಗ್ ಕೇಂದ್ರಕ್ಕೆ ಬಂದಿದ್ದರು   

ಬೆಂಗಳೂರು: ‘ನಿಮಗೆ ಕೊಟ್ಟಿರುವ ಮತಯಂತ್ರ ಪರೀಕ್ಷಿಸಿಕೊಳ್ಳಿ. ಕಂಟ್ರೋಲ್ ಯೂನಿಟ್‌, ಬ್ಯಾಲೆಟ್‌ ಯುನಿಟ್‌ನಲ್ಲಿ ವಿಳಾಸ ಪಟ್ಟಿ ಕ್ರಮವಾಗಿವೆಯೇ ನೋಡಿಕೊಳ್ಳಿ. ಮತದಾರರ ಚೀಟಿಗಳು, ಮೊಹರು, ಬ್ಯಾಡ್ಜ್.. ಎಲ್ಲವನ್ನೂ ತೆಗೆದುಕೊಂಡಿದ್ದೀರಾ ತಾನೆ? ಮತಗಟ್ಟೆ ಸೇರಿದ ಮೇಲೆ ಪಡಿಪಾಟಲು ಪಟ್ಟು ನಮ್ಮ ತಲೆ ತಿನ್ನಬೇಡಿ...'

ಇದು ನಗರದ ಮಸ್ಟರಿಂಗ್ (ಮತಯಂತ್ರ ವಿತರಣಾ) ಕೇಂದ್ರಗಳಲ್ಲಿ ಸೆಕ್ಟರ್ ಅಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ನೀಡುತ್ತಿದ್ದ ಮಾರ್ಗದರ್ಶನದ ಪರಿ. ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಶುರುವಾಗಿದ್ದು,‌ ನಗರದ ಮಸ್ಟರಿಂಗ್ ಕೇಂದ್ರಗಳ ಮೂಲಕ ಸಿಬ್ಬಂದಿ ಮತದಾನ ಪ್ರಕ್ರಿಯೆಗೆ ಶುಕ್ರವಾರ ಅಣಿಯಾದರು.

ಇವಿಎಂ ಹಾಗೂ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ಇತರೆ ಪರಿಕರಗಳನ್ನು ಸಿಬ್ಬಂದಿಗೆ ವಿತರಿಸಲು, ಕ್ಷೇತ್ರಕ್ಕೆ ಒಂದರಂತೆ ನಗರದಲ್ಲಿ 26 ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿತ್ತು. ಸಿಬ್ಬಂದಿ ಬೆಳಿಗ್ಗೆ 7 ಗಂಟೆಯಿಂದಲೇ ಕೇಂದ್ರಗಳತ್ತ ಬರುತ್ತಿದ್ದರು. ಆಯಾ ಕೇಂದ್ರಗಳ ಮೈದಾನದಲ್ಲಿ ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳು ಅವರ ದಾರಿ ಕಾಯುತ್ತಾ ನಿಂತಿದ್ದವು.

ADVERTISEMENT

ಎಲ್ಲರಿಗೂ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮತಯಂತ್ರ ಹಾಗೂ ವಿವಿ ಪ್ಯಾಟ್ ಬಳಕೆ ಬಗ್ಗೆ ಇನ್ನೂ ಗೊಂದಲದಲ್ಲಿದ್ದ ಕೆಲ ಸಿಬ್ಬಂದಿ, ಸ್ಥಳದಲ್ಲೇ ತಾಂತ್ರಿಕ ಸಹಾಯಕರಿಂದ ಮಾಹಿತಿ ಪಡೆದರು.

ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಎಷ್ಟು ಮತಗಟ್ಟೆಗಳು ಬರುತ್ತವೆ? ಯಾವ ಮತಗಟ್ಟೆಗೆ ಯಾರನ್ನು ನಿಯೋಜಿಸಲಾಗಿದೆ? ಎಂಬುದರ ವಿವರವನ್ನು ಪ್ರತಿ ಕೇಂದ್ರದ ಫಲಕಗಳಲ್ಲೂ ಪ್ರದರ್ಶಿಸಲಾಗಿತ್ತು. ತಮ್ಮ ಮತಗಟ್ಟೆಯನ್ನು ತಿಳಿದ ಸಿಬ್ಬಂದಿ, ತಮ್ಮ ಜತೆಯಲ್ಲಿ ನಿಯೋಜಿತರಾದವರನ್ನೂ ಹುಡುಕಿಕೊಂಡರು. ಮತಯಂತ್ರ ಪಡೆದು, ಸಂಜೆ ವೇಳೆಗೆ ಬಸ್‌ಗಳಲ್ಲಿ ಮತಗಟ್ಟೆಗಳತ್ತ ತೆರಳಿದರು.

ವಿನಾಯಿತಿ ಬಯಸಿ: ಹೆಬ್ಬಾಳ ಕ್ಷೇತ್ರದ ಮಸ್ಟರಿಂಗ್ ಕೇಂದ್ರವನ್ನು ಪಶು ವೈದ್ಯಕೀಯ ಕಾಲೇಜು ಆವರಣದ ಯುಎಎಸ್‌ ಶಾಲೆ ಮೈದಾನದಲ್ಲಿ ತೆರೆಯ
ಲಾಗಿತ್ತು.

ಕಿಡ್ನಿ ಸಮಸ್ಯೆ, ಆಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳಿರುವುದಾಗಿ ವೈದ್ಯಕೀಯ ಪ್ರಮಾಣ ಪತ್ರ ತೋರಿಸಿ ಎಂಟು ಮಂದಿ ವಿನಾಯಿತಿ ಪಡೆದುಕೊಂಡರು.

‘ಪ್ರಜಾವಾಣಿ’ ಜತೆ ಮಾತನಾಡಿದ ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಂ.ನಾರಾಯಣಸ್ವಾಮಿ, ‘ಹೆಬ್ಬಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, ಪ್ರತಿ ಬೂತ್‌ಗೆ ಐದು ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ. ಕೇಂದ್ರದಿಂದ ಸಿಬ್ಬಂದಿಯನ್ನು ಮತಗಟ್ಟೆಗೆ ಕರೆದೊಯ್ಯಲು 32 ಬಿಎಂಟಿಸಿ ಹಾಗೂ 32 ಮಿನಿ ಬಸ್‌ಗಳ ವ್ಯವಸ್ಥೆ ಮಾಡಿದ್ದೇವೆ’ ಎಂದರು.

‘ಹೆಚ್ಚುವರಿ ಸಿಬ್ಬಂದಿಯ ಅಗತ್ಯಬಿದ್ದರೆ ಬಳಸಿಕೊಳ್ಳಲು 100 ಮಂದಿಯನ್ನು ಕಾಯ್ದಿರಿಸಲಾಗಿದೆ. ಈ ದಿನ ಸಿಬ್ಬಂದಿ ಮತಗಟ್ಟೆಗಳಲ್ಲೇ ಉಳಿಯಲಿದ್ದು, ಅವರಿಗೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿದೆ. ಸಿಬ್ಬಂದಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ, 15 ನಿಮಿಷದಲ್ಲಿ ಆಂಬುಲೆನ್ಸ್‌ ಮತಗಟ್ಟೆ ತಲುಪಲಿದೆ’ ಎಂದು ವಿವರಿಸಿದರು.

ಮತಗಟ್ಟೆಯಲ್ಲಿ ನೀಡಿರುವ ಸೌಕರ್ಯಗಳ ಬಗ್ಗೆ ಕೇಳಿದಾಗ, ‘ಯಾವ ಸೌಕರ್ಯಗಳೂ ಇಲ್ಲ. ಗಾಳಿ, ನೀರು, ಬೆಳಕು ಸಾಕಲ್ಲವೇ. ಅವೆಲ್ಲವೂ ಇವೆ ಹೋಗಿ ಎಂದು ಹೇಳಿ ಕಳುಹಿಸಿದ್ದಾರೆ’ ಎಂದು ನಗುತ್ತಲೇ ಹೇಳಿದರು.

ಮಳೆ ಅಬ್ಬರ, ಗೊಂದಲ: ಚಾಮರಾಜಪೇಟೆ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ತೆರೆದಿದ್ದ ಕೇಂದ್ರದಲ್ಲೂ ಇದೇ ಪರಿಸ್ಥಿತಿ ಇತ್ತು. 50ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ವಿನಾಯಿತಿ ಬಯಸಿ ಕುಳಿತಿದ್ದರು. ಅಧಿಕಾರಿಗಳು ಮೈಕ್‌ನಲ್ಲಿ ಅವರ ಹೆಸರು ಕೂಗಿದರೂ, ಆ ಸಿಬ್ಬಂದಿ ಎದ್ದು ಹೋಗುತ್ತಿರಲಿಲ್ಲ.

ಆಗ ಅಧಿಕಾರಿಗಳು, ‘ಸಂಜೆ ಮಳೆ ಬರುತ್ತದೆ. ಅಷ್ಟರೊಳಗೆ ಎಲ್ಲರೂ ಮತಗಟ್ಟೆಗಳನ್ನು ತಲುಪಬೇಕು. ಕೂಗಿದರೂ ಯಾರೂ ಬರುತ್ತಿಲ್ಲ. ನಿಮಗೆಲ್ಲ ಯಾವುದೇ ಕಾರಣಕ್ಕೂ ವಿನಾಯಿತಿ ಸಿಗಲ್ಲ. ಕರೆದ ಕೂಡಲೇ ಬರದಿದ್ದರೆ, ದೂರದ ಮತಗಟ್ಟೆ ಗಳಿಗೆ ಕರ್ತವ್ಯಕ್ಕೆ ನಿಯೋಜಿಸುತ್ತೇವೆ. ಇಲ್ಲವಾದರೆ, ನಿರ್ಲಕ್ಷ್ಯದ ಆರೋಪದಡಿ ನೋಟಿಸ್ ನೀಡಿ, ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಬೆದರಿಸುತ್ತಿದ್ದರು. ಮಹಿಳೆಯರು ಅತಂತ್ರ: ಹಸುಗೂಸನ್ನು ಹೊತ್ತು ಬಂದಿದ್ದ ಮಹಿಳೆಯರು, ಕಾರ್ಯ ವಿನಾಯಿತಿಯ ನಿರೀಕ್ಷೆಯಲ್ಲಿದ್ದರು.

ಮಕ್ಕಳನ್ನು ಸಂತೈಸುತ್ತಲೇ ಅವರು ಅಧಿಕಾರಿಗಳ ಬಳಿ ವಿನಾಯಿತಿ ಕೋರುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ನಗರದ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲೂ ಈ ದೃಶ್ಯ ಸಾಮಾನ್ಯವಾಗಿತ್ತು. ‘11 ತಿಂಗಳ ಮಗುವಿದ್ದು, ವಿನಾಯಿತಿ ಕೇಳಿದರೂ ಕೊಡುತ್ತಿಲ್ಲ. ಮನೆ ದೊಮ್ಮಲೂರಿನಲ್ಲಿದ್ದು, ದೂರದ ಮತಗಟ್ಟೆ ಕೇಂದ್ರಕ್ಕೆ ಹಾಕಿದರೆ ರಾತ್ರಿ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ’ ಎಂದು ಚಾಮರಾಜಪೇಟೆಯ ಕೇಂದ್ರಕ್ಕೆ ಬಂದಿದ್ದ ಎಸ್‌ಬಿಐ ಬ್ಯಾಂಕ್‌ನ ಮಹಿಳಾ ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡರು.

‘ಗರ್ಭಿಣಿಯರು, ಹಸುಗೂಸನ್ನು ಹೊಂದಿರುವ ತಾಯಂದಿರು, ಅಂಗವಿಕಲರು... ಹೀಗೆ ಕೆಲವು ವರ್ಗದವರನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ವಿನಾಯಿತಿ ನೀಡಬೇಕು. ಕರ್ತವ್ಯಕ್ಕೆ ಬರದಿದ್ದರೆ, ಕ್ರಿಮಿನಲ್ ಕೇಸ್ ಹಾಕಿಸುವುದಾಗಿ ಬೆದರಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಿ ಕೆಲಸ ಬೇಕು, ಜವಾಬ್ದಾರಿ ಬೇಡ ಎಂದರೆ ಹೇಗೆ? ಮಹತ್ವದ್ದೆನಿಸಿದ ಚುನಾವಣಾ ಕಾರ್ಯದಲ್ಲಿ ಪತ್ನಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದು ಪತ್ನಿ ಸುರಾನಾ ಬೇಗಂ ಅವರನ್ನು ಚುನಾವಣಾ ಕಾರ್ಯಕ್ಕೆ ಕರೆತಂದಿದ್ದ ಹರಿಹರದ ಅಬ್ದುಲ್ ಖಾದರ್ ಹೇಳಿದರು.

ಉದ್ಯಾನನಗರಿ ಮೌನ: ಮತದಾನದ ಮುನ್ನಾ ದಿನವಾದ ಶುಕ್ರವಾರ ಉದ್ಯಾನನಗರಿಯು ಮೌನ ಧರಿಸಿ ನೆಮ್ಮದಿ ತಾಳಿದಂತೆ ಕಂಡುಬಂತು.

ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರಿಂದ ರಾಜಕೀಯ ಪಕ್ಷಗಳ ಜಾಥಾ , ರೋಡ್ ಶೋಗಳಿಗೆ ಗುರುವಾರವೇ ತೆರೆ ಬಿದ್ದಿತ್ತು.

ಹೀಗಾಗಿ ನಗರದಲ್ಲಿ ಬಿರುಸಿನ ಚಟುವಟಿಕೆಗಳೇನೂ ಕಾಣಸಿಗಲಿಲ್ಲ. ಮತ್ತೊಂದೆಡೆ, ಚುನಾವಣೆ ಆಯೋಗದ ಆದೇಶದಂತೆ ಮದ್ಯದ ಅಂಗಡಿಗಳೂ ಬಾಗಿಲು ಎಳೆದುಕೊಂಡಿದ್ದವು. ಕೆಲ ದಿನಗಳಿಂದ ಅಖಾಡದಲ್ಲಿ ಬೆವರು ಹರಿಸಿದ ಅಭ್ಯರ್ಥಿಗಳು, ಗುರುವಾರ ರಾತ್ರಿಯಿಂದ ಮನೆ ಮನೆ ಪ್ರಚಾರ ಶುರುವಿಟ್ಟಿದ್ದರು.

ರಸ್ತೆಗಳು ವಾಹನ ದಟ್ಟಣೆಯ ಜಂಜಾಟದಿಂದ ದಿನದ ಮಟ್ಟಿಗೆ ಮುಕ್ತವಾದಂತೆ ಕಂಡುಬಂದವು.

ಬಿಎಂಟಿಸಿಯ 6,783 ಬಸ್‌ಗಳ ಪೈಕಿ 1,493 ಬಸ್‌ಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗಿದ್ದರಿಂದ, ಬಸ್‌ಗಳ ಕೊರತೆ ಉಂಟಾಗಿ ನಾಗರಿಕರು ತೊಂದರೆ ಅನುಭವಿಸಿದರು.

ಎಲ್ಲಿ ಮನೆ, ಎಲ್ಲಿ ಮತಗಟ್ಟೆ?

‘ರಾತ್ರಿ ಮನೆಗೆ ತೆರಳಿ, ಬೆಳಿಗ್ಗೆ ಮತದಾನ ಆರಂಭವಾಗುವ ಒಂದು ತಾಸಿಗೆ ಮುನ್ನ ಬರಬಹುದು ಎಂದುಕೊಂಡಿದ್ದೆವು. ಆದರೆ, ಒಂದು ಭಾಗದಲ್ಲಿ ವಾಸಿಸುವವರನ್ನು ವಿರುದ್ಧ ದಿಕ್ಕಿನಲ್ಲಿರುವ ಮತಗಟ್ಟೆಗಳಿಗೆ ನಿಯೋಜಿಸಿದ್ದಾರೆ. ಹೀಗಾದರೆ, ನಾವು ರಾತ್ರಿ ಮನೆಗೆ ತೆರಳುವುದು ಹೇಗೆ? ಬೆಳಿಗ್ಗೆ 6 ಗಂಟೆಯೊಳಗೆ ಮತಗಟ್ಟೆಗೆ ಬರುವುದು ಹೇಗೆ?’ ಎಂದು ಶಿಕ್ಷಕಿಯೊಬ್ಬರು ಪ್ರಶ್ನಿಸಿದರು.

‘ಹೆರಿಗೆ ಆಯ್ತು...’

‘ಮತಯಂತ್ರ ನಿರ್ವಹಣೆ ಕುರಿತು ಮೇ 7ರಂದು ತರಬೇತಿ ಏರ್ಪಡಿಸಲಾಗಿತ್ತು. ಪತಿ ಜತೆ ಅಲ್ಲಿಗೆ ಬಂದಿದ್ದ ತುಂಬು ಗರ್ಭಿಣಿ ವಿನಾಯಿತಿ ಕೋರಿದ್ದರು. ಅದಕ್ಕೆ ಅಧಿಕಾರಿಗಳು ಒಪ್ಪಿರಲಿಲ್ಲ. ಆಗ, ಕೆಲಸ ಹೋದರೆ ಹೋಯಿತು. ನೀನು ಮತದಾನದ ದಿನ ಬರಬೇಡ ಎಂದು ನಾನೇ ಹೇಳಿ ಕಳುಹಿಸಿದ್ದೆ. ಗುರುವಾರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ’ ಎಂದು ಮಲ್ಲೇಶ್ವರ ಕೇಂದ್ರದ ಸಿಬ್ಬಂದಿಯೊಬ್ಬರು ಹೇಳಿದರು.

ಮತದಾನಕ್ಕೆ ಫೇಸ್‌ಬುಕ್‌ ಸಹಯೋಗ

ವಿಧಾನಸಭೆಗೆ ಶನಿವಾರ ನಡೆಯಲಿರುವ ಮತದಾನವನ್ನು ಉತ್ತೇಜಿಸಲು ಚುನಾವಣಾ ಆಯೋಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸಹಯೋಗ ಪಡೆದಿದೆ.

ಈ ಸಹಯೋಗದ ಭಾಗವಾಗಿ ಫೇಸ್‌ಬುಕ್‌ ಬಳಕೆದಾರರಿಗೆ ನ್ಯೂಸ್ ಫೀಡ್ ರಿಮೈಂಡರ್‌ವೊಂದನ್ನು ಕಳುಹಿಸುತ್ತದೆ. ಈ ರಿಮೈಂಡರ್ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ ವಿಳಾಸದೊಂದಿಗೆ (http://kgis.ksrsac.in/ election)ದೊಂದಿಗೆ ಸಂಪರ್ಕ ಹೊಂದಿದೆ. ಅದರಲ್ಲಿ ಸಾರ್ವಜನಿಕರು ತಮ್ಮ ಮತಗಟ್ಟೆಯ ಹಾಗೂ ಇತರೆ ಮತಗಟ್ಟೆಗಳ ವಿವರಗಳನ್ನು ಕಾಣಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.