ಬೆಂಗಳೂರು: ಮತದಾನ ಸಂದರ್ಭದಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.
ಮತ ಚಲಾಯಿಸಿದ ಬಳಿಕ ಮನೆಗೆ ತೆರಳುತ್ತಿದ್ದ ಬೇಲೂರು ತಾಲ್ಲೂಕಿನ ರೇವತಿ (50), ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಡ್ಡರಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿ ಮನೆಗೆ ತಲುಪಿದ ತಿಮ್ಮೇಗೌಡ (65) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮತದಾನ ಆಟೊದಲ್ಲಿ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಚಿಲ್ಕೂರು ಗ್ರಾಮದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ ಚಲಾಯಿಸಲು ಬಂದಿದ್ದ ಬೆಳ್ತಂಗಡಿ ತಾಲ್ಲೂಕಿನ ಅಂಡಿಂಜೆ ಸಮೀಪದ ಜಾರಿಗೆದಡಿ ನಿವಾಸಿ ಅಣ್ಣಿ ಆಚಾರ್ಯ (70) ಮತ್ತು ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ನಿವಾಸಿ ಹರೀಶ್ ಮೇರ (40) ಮತಗಟ್ಟೆ ಆವರಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮಕ್ಕೆ ಬೈಕಿನಲ್ಲಿ ಸಂಬಂಧಿಯೊಬ್ಬರ ಜೊತೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ರಾಜಮ ಲಾಲಸಾಬ್ ನದಾಫ್ (46) ಸಾವಿಗೀಡಾಗಿದ್ದಾರೆ. ಹೊಸಪೇಟೆ ತಾಲ್ಲೂಕಿನ ಕುಪ್ಪಯ್ಯನ ಕ್ಯಾಂಪ್ ನಿವಾಸಿ ದೊಡ್ಡ ವೆಂಕಟೇಶ (50) ಕುಟುಂಬದ ಜೊತೆ ಮತ ಚಲಾಯಿಸಲು ಹೋಗುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.