ಬೆಂಗಳೂರು: ರಾಜ್ಯ ರಾಜಕಾರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಬಿಜೆಪಿ ಆಮಿಷಗಳಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಡ್, ಹೋಟೆಲ್ ಮೊರೆ ಹೋಗಿದ್ದಾರೆ. ಗುರುವಾರ ತಡರಾತ್ರಿ ಕೊಚ್ಚಿಗೆ ಹೋಗುವುದಾಗಿ ಸುದ್ದಿ ಹರಿಬಿಟ್ಟಿದ್ದ ಮುಖಂಡರು ಹೆದ್ದಾರಿಯಲ್ಲಿ ಬಸ್ ಬದಲಾಯಿಸಿ ಹೈದರಾಬಾದ್ಗೆ ತೆರಳಿದ್ದಾರೆ.
ಕಾಂಗ್ರೆಸ್ ಶಾಸಕರು ಹೈದರಾಬಾದ್ ಹೆದ್ದಾರಿಯಲ್ಲಿ ಬಸ್ ಬದಲಾಯಿಸಿದ್ದಾರೆ. ಜೆಡಿಎಸ್ ಶಾಸಕರ ಜತೆಗೂಡಿ ಎಲ್ಲಾ ಶಾಸಕರು ಹೈದರಾಬಾದ್ಗೆ ತೆರಳಿ ಅಲ್ಲಿ ತಂಗಿದ್ದಾರೆ ಎಂದು ಶಾಸಕರು ಬಸ್ ಬದಲಾಯಿಸುತ್ತಿರುವ ವಿಡಿಯೊದೊಂದಿಗೆ ಎಎನ್ಐ ಟ್ವೀಟ್ ಮಾಡಿದೆ.
ಬಿಡದಿ ಬಳಿಯ ಈಗಲ್ಟನ್ ಸೆರಾರ್ಟ್ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಕೊಚ್ಚಿಗೆ ತೆರಳಲು ವಿಶೇಷ ವಿಮಾನ ವ್ಯವಸ್ಥೆ ಆಗದ ಕಾರಣ ತಡರಾತ್ರಿ ಬಸ್ನಲ್ಲಿ ಕೊಚ್ಚಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.
ಆದರೆ, ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕರು ಹೈದರಾಬಾದ್ ಹೆದ್ದಾರಿಯಲ್ಲಿ ಬಸ್ ಬದಲಾಯಿಸಿದ್ದಾರೆ.
ಬುಧವಾರ ಮಧ್ಯಾಹ್ನ ಒಟ್ಟಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮುಖಂಡರ ಜತೆಗೂಡಿ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದರು. ಜೆಡಿಎಸ್ ತನ್ನ ಶಾಸಕರಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ ಹೋಟೆಲ್ನಲ್ಲಿ ವ್ಯವಸ್ಥೆ ಮಾಡಿತ್ತು.
ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಹೆಣಗಾಡುತ್ತಿದ್ದರೆ, ಬಿಜೆಪಿ ಬಹುಮತಕ್ಕಾಗಿ ಗಾಳ ಹಾಕಿಕೊಂಡು ಕೂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.