ADVERTISEMENT

ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ತಂತ್ರಗಾರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:54 IST
Last Updated 8 ಏಪ್ರಿಲ್ 2018, 19:54 IST
ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ತಂತ್ರಗಾರಿಕೆ
ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ತಂತ್ರಗಾರಿಕೆ   

ಮೈಸೂರು: ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ವಿರುದ್ಧ ಸೆಣಸಲು ಸಜ್ಜಾಗುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮೈಸೂರಿನಲ್ಲಿ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಈ ನಿಟ್ಟಿನಲ್ಲಿ ಭಾನುವಾರ ಕ್ಷೇತ್ರದ ಪ್ರಮುಖರ ಸಭೆ ನಡೆಸಿದರು. ಅಲ್ಲದೆ, ನಿವೃತ್ತ ಪೊಲೀಸ್‌ ಅಧಿಕಾರಿ ಹಾಗೂ ಕಾಂಗ್ರೆಸ್‌ ಮುಖಂಡ ಎಲ್‌.ರೇವಣಸಿದ್ಧಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ತಮ್ಮನ್ನು ಬೆಂಬಲಿಸುವಂತೆ ರೇವಣಸಿದ್ಧಯ್ಯ ಅವರನ್ನು ಕೋರಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ ಎನ್ನಲಾಗಿದೆ. ಅವರನ್ನು ಸದ್ಯದಲ್ಲೇ ಯಡಿಯೂರಪ್ಪ ಕೂಡ ಭೇಟಿ ಮಾಡಲಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ‘ಚುನಾವಣೆ ಸಂಬಂಧ ಹಿರಿಯ ಮುಖಂಡ ರೇವಣಸಿದ್ಧಯ್ಯ ಅವರಿಂದ ಸಲಹೆ ಹಾಗೂ ಆಶೀರ್ವಾದ ಪಡೆದಿದ್ದೇನೆ. ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಶಕ್ತಿ, ಸಾಮರ್ಥ್ಯ ಹೊಂದಿದ್ದಾರೆ’ ಎಂದರು.

‘ವರುಣಾ ಕ್ಷೇತ್ರದ ಕಾರ್ಯಕರ್ತರು ನನ್ನ ಸ್ಪರ್ಧೆ ಬಗ್ಗೆ ಒಲವು ತೋರುತ್ತಿದ್ದಾರೆ. ಅಭ್ಯರ್ಥಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ತಂದೆ ಜೊತೆ ಚರ್ಚಿಸಿ, ಕ್ಷೇತ್ರದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕೆಂದು ತೀರ್ಮಾನಿಸುತ್ತೇನೆ. ಸದ್ಯಕ್ಕೆ ಪಕ್ಷದ ಕಾರ್ಯಕರ್ತನಾಗಿ ಈ ಭಾಗದಲ್ಲಿ ಓಡಾಡುತ್ತೇನೆ. ಕಾರ್ಯಕರ್ತರು ಉತ್ಸುಕರಾಗಿದ್ದು, ಬಿಜೆಪಿಗೆ ಗೆಲುವು ಖಚಿತ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.