ನೆಲಮಂಗಲ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ನೆಲಮಂಗಲಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲಾಗುವುದು, ಶಾಶ್ವತ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಪಟ್ಟಣದ ಬಸವಣ್ಣದೇವರ ಮಠದ ಮೈದಾನದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿಯಾಗಿದ್ದಾಗ ನೆಲಮಂಗಲ ಅಭಿವೃದ್ಧಿಗೆ ₹850 ಕೋಟಿ ನೀಡಿದ್ದೇನೆ. 4ಸಾವಿರ ಮನೆಗಳು, ವಾಲ್ಮೀಕಿ, ಅಂಬೇಡ್ಕರ್, ಭೋವಿ, ಅಗ್ನಿಶಾಮಕ ಠಾಣೆ, ನ್ಯಾಯಾಲಯ ನಿರ್ಮಾಣವಾಗಿದೆ. ನಮ್ಮ ಸರ್ಕಾರ ಮಂಜೂರು ಮಾಡಿದ್ದ ಬಿ.ಎಚ್.ರಸ್ತೆ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳಲಾಗಿದೆ. ಇದು ಸ್ಥಳೀಯ ಶಾಸಕರ ಅಭಿವೃದ್ಧಿಯ ಬಗೆಗೆ ಇರುವ ಅಸಡ್ಡೆಯನ್ನು ತೋರಿಸುತ್ತದೆ’ ಎಂದರು.
ಶಾಸಕರು, ಲೋಕಸಭಾ ಸದಸ್ಯರ ಆಪ್ತ ಸಹಾಯಕರಿಗೆ ಸಂಬಳ ಕೊಟ್ಟಿಲ್ಲದಿರುವುದು ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿರುವುದನ್ನು ತೋರಿಸುತ್ತದೆ. ಸರ್ಕಾರಿ ಆಸ್ತಿಗಳನ್ನು ಅಡವಿಟ್ಟು ಸಾಲ ತಂದಿರುವ ಮೊದಲನೇ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ’ ಎಂದು ಟೀಕಿಸಿದರು.
ಕೇಂದ್ರ ಸಚಿವ ಆನಂತಕುಮಾರ್,‘ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ಗೆ ನೀರು ಕುಡಿಸಿ, ಯಡಿಯೂರಪ್ಪ ನಿಮಗೆ ಕುಡಿ
ಯುವ ನೀರು ಕೊಡುತ್ತಾರೆ. ಸಿದ್ದರಾಮಯ್ಯ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಏಕೆ ಮಾಡಿಲ್ಲವೆಂದರೆ, ಅವರು ಏಳಲು ತಯಾರಿಲ್ಲ ಅದಕ್ಕೆ’ ಎಂದು ವ್ಯಂಗ್ಯವಾಡಿದರು.
ರಿವರ್ಸ್ ಗೇರ್ನಲ್ಲಿ ಸಿದ್ದರಾಮಯ್ಯ: ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿವೃದ್ಧಿಯಲ್ಲಿ ನ್ಯೂಟ್ರಲ್ ಗೇರ್ನಲ್ಲಿದ್ದರು. ಮೋದಿ ಟಾಪ್ ಗೇರ್ನಲ್ಲಿದ್ದಾರೆ. ಸಿದ್ದರಾಮಯ್ಯ ರಿವರ್ಸ್ ಗೇರ್ನಲ್ಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.