ADVERTISEMENT

ಗೃಹರಕ್ಷಕ ದಳ ಸಿಬ್ಬಂದಿ ಪರಿಹಾರ ಧನದಲ್ಲಿ ಹೆಚ್ಚಳ

ಹೆಚ್ಚುವರಿ ಕಮಾಂಡೆಂಟ್ ಜನರಲ್ ಡಿ.ರೂಪಾ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:33 IST
Last Updated 8 ಫೆಬ್ರುವರಿ 2018, 9:33 IST
ಗೃಹರಕ್ಷಕ ದಳ ಸಿಬ್ಬಂದಿ ಪರಿಹಾರ ಧನದಲ್ಲಿ ಹೆಚ್ಚಳ
ಗೃಹರಕ್ಷಕ ದಳ ಸಿಬ್ಬಂದಿ ಪರಿಹಾರ ಧನದಲ್ಲಿ ಹೆಚ್ಚಳ   

ದಾವಣಗೆರೆ: ಗೃಹರಕ್ಷಕ ದಳದ ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟರೆ ನೀಡುವ ಪರಿಹಾರ ಧನವನ್ನು ₹ 5 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ ಎಂದು ಗೃಹರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್‌ ಜನರಲ್‌ ಡಿ.ರೂಪಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಗೃಹರಕ್ಷಕ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ತವ್ಯನಿರತ ಸಿಬ್ಬಂದಿಗೆ ಶೇ 60 ರಷ್ಟು ಗಾಯಗಳಾಗಿದ್ದರೆ ₹ 3 ಲಕ್ಷ, ಶೇ 40ರಷ್ಟು ಗಾಯಗಳಾಗಿದ್ದರೆ ₹ 2 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ದಿನಭತ್ಯೆ ಹೆಚ್ಚಳಕ್ಕೂ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ ₹ 400 ದಿನಭತ್ಯೆ ಇದ್ದು, ಅದನ್ನು ₹ 621ಕ್ಕೆ, ಇತರೆ ಕಡೆಗಳಲ್ಲಿ ₹ 325 ಇದ್ದು, ಅದನ್ನು ₹ 450 ಗೆ ಹೆಚ್ಚಿಸಲು ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಇದಕ್ಕೂ ಸರ್ಕಾರ ಒಪ್ಪಿಗೆ ಸೂಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಗೃಹರಕ್ಷಕ ದಳ ಉದ್ಯೋಗ ಸೃಷ್ಟಿಸುವ ಇಲಾಖೆ ಅಲ್ಲ; ಆದರೆ, ಚುನಾವಣೆ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಇಲಾಖೆ ಪಾತ್ರ ಮಹತ್ವದ್ದು. ಈ ಹಿನ್ನೆಲೆಯಲ್ಲಿ ಪೊಲೀಸ್‌ ನೇಮಕಾತಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೂ ಮೀಸಲಾತಿ ಕಲ್ಪಿಸಬೇಕೆಂಬ ಪ್ರಸ್ತಾವ ಇದೆ. ಅಲ್ಲದೇ, ಬಸ್‌ ಪಾಸ್‌ ಸೌಲಭ್ಯದ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.