ADVERTISEMENT

‘ಜಾತಿ ಪ್ರಮಾಣ ಪತ್ರದಲ್ಲಿ ಆರ್ಯ ವೈಶ್ಯ’

ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:52 IST
Last Updated 8 ಫೆಬ್ರುವರಿ 2018, 8:52 IST
ಆರ್ಯ ವೈಶ್ಯ ಮಹಾಸಭಾದ ಹಿರಿಯ ಉಪಾಧ್ಯಕ್ಷ ಕುಂಟ್ನಾಳ್ ವೆಂಕಟೇಶ, ಶಾಸಕ ಎಚ್.ಪಿ. ಮಂಜುನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಇದ್ದರು. - ಪ್ರಜಾವಾಣಿ ಚಿತ್ರ
ಆರ್ಯ ವೈಶ್ಯ ಮಹಾಸಭಾದ ಹಿರಿಯ ಉಪಾಧ್ಯಕ್ಷ ಕುಂಟ್ನಾಳ್ ವೆಂಕಟೇಶ, ಶಾಸಕ ಎಚ್.ಪಿ. ಮಂಜುನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಇದ್ದರು. - ಪ್ರಜಾವಾಣಿ ಚಿತ್ರ   

ಬೆಂಗಳೂರು: ಆರ್ಯ ವೈಶ್ಯ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಪಡೆಯಲು ತೊಡಕಾಗಿರುವ ಸಮಸ್ಯೆ ಬಗೆಹರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ನಡೆದ ಆರ್ಯ ವೈಶ್ಯ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಆರ್ಯ ವೈಶ್ಯ ಜಾತಿ ಹೆಸರನ್ನು ವೈಶ್ಯ ಎಂದು ಮಾತ್ರ ನಮೂದಿಸಲಾಗುತ್ತಿದೆ. ಇದರ ಬದಲು ಆರ್ಯ ವೈಶ್ಯ ಎಂದು ನಮೂದಿಸಬೇಕು ಎಂದು ಹಲವು ಮನವಿಗಳು ಬಂದಿವೆ. ಈ ಕುರಿತು ಸೂಕ್ತ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ’ ಎಂದರು.

‘ವಾಸವಿ ಅಕಾಡೆಮಿಗೆ ಅನುದಾನ ಮತ್ತು ಜಾಗ ನೀಡಬೇಕು ಎಂದೂ ಆರ್ಯ ವೈಶ್ಯ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಈ ಬೇಡಿಕೆಯನ್ನೂ ಈಡೇರಿಸುತ್ತೇನೆ’ ಎಂದು ಮುಖ್ಯಮಂತ್ರಿ ಆಶ್ವಾಸನೆ ನೀಡಿದರು.

ADVERTISEMENT

‘ನಾಲ್ಕು ಚತುವರ್ಣಗಳಲ್ಲಿ ಲಕ್ಷ್ಮಿ ಒಲಿದಿರುವುದು ಆರ್ಯ ವೈಶ್ಯರಿಗೆ ಮಾತ್ರ. ಹಾಗೆಂದು, ಈ ಸಮುದಾಯದ ಎಲ್ಲರೂ ಶ್ರೀಮಂತರು ಎಂದಲ್ಲ. ಹೆಚ್ಚಿನ ಜನ ಮಧ್ಯಮ ವರ್ಗದವರು. ಯಾರೊಂದಿಗೂ ದ್ವೇಷ ಸಾಧಿಸದೆ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣ ಆರ್ಯ ವೈಶ್ಯರಲ್ಲಿದೆ’ ಎಂದು ಬಣ್ಣಿಸಿದರು.

‘ಮಹಾತ್ಮ ಗಾಂಧಿ ಮತ್ತು ರಾಮ್ ಮನೋಹರ್ ಲೋಹಿಯಾ ಅವರಂಥ ಎರಡು ನಕ್ಷತ್ರಗಳನ್ನು ಈ ಸಮಾಜ ದೇಶಕ್ಕೆ ನೀಡಿದೆ. ದೇಶದ ಅಭಿವೃದ್ಧಿಯಲ್ಲಿ ಈ ಇಬ್ಬರು ಮಹಾ ನಾಯಕರ ಹೋರಾಟ ಅವಿಸ್ಮರಣೀಯ’ ಎಂದರು.

ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂರ್ತಿ, ಶಾಸಕ ಎಚ್.ಪಿ. ಮಂಜುನಾಥ್, ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ ಪಿ. ರವಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.