ಶಿವಮೊಗ್ಗ: ‘ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣ ಇಲ್ಲ. ಹೈಕಮಾಂಡ್ ಟಿಕೆಟ್ ಜತೆಗೆ ಖರ್ಚಿಗೆ ಹಣವನ್ನೂ ನೀಡಿದರೆ ಸಾಗರ ಕ್ಷೇತ್ರದಿಂದ ಈ ಬಾರಿಯೂ ಕಣಕ್ಕೆ ಇಳಿಯುತ್ತೇನೆ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇದೇ ನನ್ನ ಕೊನೆಯ ಚುನಾವಣೆ ಎಂದು ಕಳೆದ ಬಾರಿ ಹೇಳಿದ್ದೆ. ಹೀಗಾಗಿ ಚುನಾವಣೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಪಕ್ಷ ಹಾಗೂ ಜನರು ಬಯಸಿದರೆ ಇದೊಂದು ಬಾರಿ ಮನಸ್ಸು ಮಾಡುತ್ತೇನೆ’ ಎಂದರು.
‘ಚಿತ್ರನಟಿ ಜಯಮಾಲಾ ಸಾಗರ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಕುರಿತು ಮಾಹಿತಿ ಇಲ್ಲ. ನನ್ನ ಬಳಿ ಚರ್ಚಿಸಿಯೂ ಇಲ್ಲ. ವಿಧಾನ ಪರಿಷತ್ ಸದಸ್ಯರಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ ಅರಣ್ಯ ನಾಶವಾಗುತ್ತಿದೆ ಎಂಬ ಉಪ ಲೋಕಾಯುಕ್ತರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕಾಗೋಡು, ‘ಮಲೆನಾಡಿಗರು ಶತಮಾನಗಳಿಂದ ಅರಣ್ಯದಲ್ಲಿ ಬದುಕಿದ್ದಾರೆ. ಬೇರೆಯವರಿಂದ ಇಲ್ಲಿನ ಜನ ಸಂಸ್ಕೃತಿಯ ಪಾಠ ಕಲಿಯಬೇಕಾಗಿಲ್ಲ. ಅವರಿಗೆ ಮಲೆನಾಡಿನ ಮೇಲೆ ಪ್ರೀತಿ ಇದ್ದರೆ ಇಲ್ಲೇ ಬಂದು ನೆಲೆಸಲಿ’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.