ರಾಮನಗರ: ಪರವಾನಗಿ ಅವಧಿ ಮೀರಿದ ₹ 1 ಕೋಟಿ ಮೌಲ್ಯದ ಮದ್ಯ ಹಾಗೂ ಲಾರಿಯನ್ನು ಇಲ್ಲಿನ ಅಬಕಾರಿ ಇಲಾಖೆ ಹಾಗೂ ಎಂಸಿಸಿ ತಂಡದ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದರು.
ಒಟ್ಟು 1700 ಕೇಸ್ನಷ್ಟು ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ₹ 88 ಲಕ್ಷದಷ್ಟಿದೆ. ಇದರೊಟ್ಟಿಗೆ ₹ 12 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗ್ಗೆ ಗಸ್ತಿನಲ್ಲಿದ್ದ ಎಂಸಿಸಿ ಅಧಿಕಾರಿಗಳು ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಕೆ. ಚಂದ್ರಶೇಖರ್, ಸಬ್ ಇನ್ಸ್ಪೆಕ್ಟರ್ ವಾಣಿ ನೇತೃತ್ವದ ತಂಡವು ದಾಳಿ ನಡೆಸಿತು.
ಅಧಿಕಾರಿಗಳ ಎಡವಟ್ಟು?
ಸರ್ಕಾರಿ ಅಂಗಸಂಸ್ಥೆಯಿಂದ ಜಿಲ್ಲೆಗೆ ಪೂರೈಕೆಯಾದ ಮದ್ಯದ ದಾಸ್ತಾನು ಇದಾಗಿದೆ ಎನ್ನಲಾಗಿದೆ. ಮದ್ಯ ತುಂಬಿದ ಲಾರಿಯು ಮಾರ್ಚ್ 31ರಂದು ಸಂಜೆ ರಾಮನಗರದ ಗೋಡೌನ್ಗೆ ಬಂದಿದೆ. ಅಂದು ಭಾನುವಾರವಾದ ಕಾರಣ ಮದ್ಯ ಗೋಡೌನ್ಗೆ ಸೇರಿಲ್ಲ. ಏ.1ರಂದು ಆರ್ಥಿಕ ವರ್ಷ ಲೆಕ್ಕದ ಕಾರಣ ನೀಡಿ ಅಂದೂ ಮದ್ಯವನ್ನು ಲಾರಿಯಲ್ಲೇ ಇಡಲಾಗಿತ್ತು. ಆ ವೇಳೆಗೆ ಮದ್ಯ ಸಾಗಣೆಯ ಪರವಾನಗಿ ಅವಧಿ ಮುಗಿದಿತ್ತು ಎಂದು ತಿಳಿದುಬಂದಿದೆ.
ಸಾರ್ವಜನಿಕರ ದೂರು ಆಧರಿಸಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಮದ್ಯ ವಶಕ್ಕೆ ಪಡೆದಿದ್ದಾರೆ. ಇದೀಗ ಚುನಾವಣೆ ಮುಗಿಯುವವರೆಗೂ ಮದ್ಯವು ಅಧಿಕಾರಿಗಳ ವಶದಲ್ಲಿಯೇ ಇರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.