ADVERTISEMENT

‘ಕಣ್ಮಣಿ’ ಹೊಸ ಧಾರಾವಾಹಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
‘ಕಣ್ಮಣಿ’ ಧಾರಾವಾಹಿಯ ದೃಶ್ಯ
‘ಕಣ್ಮಣಿ’ ಧಾರಾವಾಹಿಯ ದೃಶ್ಯ   

ಉದಯ ಟಿ.ವಿ.ಯಲ್ಲಿ ಮಾರ್ಚ್ 19ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ಗಂಟೆಗೆ ‘ಕಣ್ಮಣಿ’ ಹೊಸ ಧಾರಾವಾಹಿ ಪ್ರಸಾರವಾಗಲಿದೆ.

ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರುವ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿ ಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿ ಅಂಜಲಿ. ಜೀವನದಲ್ಲಿ ನಡೆದ ಅಹಿತಕರ ಘಟನೆಯಿಂದ ನೊಂದ ನಾಯಕಿ ಹೊಸ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ. ಅವಳ ಮುಂದೆ ಎದುರಾಗುವ ವ್ಯಕ್ತಿಗಳು ಮತ್ತು ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದೇ ಕಥಾಹಂದರ. ಧಾರಾವಾಹಿಯಲ್ಲಿ ತ್ರಿಕೋನ ಪ್ರೇಮಕಥೆ ಇದೆ.

ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ದ್ವಾರಕನಾಥ್ ಅಲಿಯಾಸ್ ಡಿಕೆ ಉದ್ಯಮಿ. ‘ತಾನು ತಪ್ಪು ಮಾಡಲ್ಲ. ತಪ್ಪು ಮಾಡಿದವರನ್ನೂ ಬಿಡಲ್ಲ’ ಅನ್ನೋದು ಅವನ ಘೋಷವಾಕ್ಯ. ಹೆಂಡತಿ ಕಾವ್ಯಾ ಸತ್ತು ನಾಲ್ಕು ವರ್ಷ ಕಳೆದರೂ ಇನ್ನೊಂದು ಮದುವೆಯಾಗದೆ ಅವಳ ನೆನಪಲ್ಲಿ ಇರುವ ಅಮರ ಪ್ರೇಮಿ. ಕಣ್ಮಣಿಯ ಇನ್ನೊಬ್ಬ ನಾಯಕ ಕಿಶನ್. ತುಂಬು ಕುಟುಂಬದಲ್ಲಿ ಬೆಳೆದಿರುವ ಈತ ಸಂಸ್ಕಾರವಂತ. ಜೊತೆಗೆ ತುಂಟ.

ADVERTISEMENT

ಡಿಕೆ, ಅಂಜಲಿ, ಕಿಶನ್‌ ನಡುವೆ ನಡೆಯುವ ಪ್ರೇಮಕಥೆಯೇ ಕಣ್ಮಣಿ. ಪಾರಿಜಾತ ಟೆಲಿ ಎಂಟರ್‌ ಟ್ರೇನರ್ಸ್ ಬ್ಯಾನರ್‌ ಅಡಿ ಧಾರಾವಾಹಿ ನಿರ್ಮಾಣವಾಗುತ್ತಿದೆ. ಚಿತ್ರಕಥೆ ದೇವ್, ವೆಂಕಟ್‌ರಾಮ್ ಅವರದ್ದು. ಪೃಥ್ವಿರಾಜ್ ಕುಲಕರ್ಣಿ ನಿರ್ದೇಶಿಸುತ್ತಿದ್ದು, ಜೀವ ಅವರ ಛಾಯಾಗ್ರಹಣವಿದೆ.  ದಿವ್ಯಾ ಶೈಲೇಶ್, ದರ್ಶಕ್ ಗೌಡ, ನಂದೀಶ್ ಅಂದಗಾರ, ನಾಗೇಶ್, ಮೈಸೂರು ಮಾಲತಿ, ಗಿರೀಶ್, ಮೈಸೂರು ಶೋಭಾ, ನಾಯಕ್, ಸುಜಾತಾ, ಬೇಬಿ ಶ್ರೀಲಕ್ಷ್ಮಿ, ಸಿಂಚನ್‌ ತಾರಾಗಣದಲ್ಲಿದ್ದಾರೆ. ಈಗಾಗಲೇ, ಮೂವತ್ತಕ್ಕೂ ಹೆಚ್ಚು ಸಂಚಿಕೆಗಳ ಚಿತ್ರೀಕರಣ ಮುಗಿದಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.