ಮುಖದ ಮೇಕಪ್ಗೆ ಟಚ್ ಮಾಡಿಸಿಕೊಂಡ ಆದಿತ್ಯ ಮುಖ್ಯಮಂತ್ರಿ ಪಾತ್ರಧಾರಿ ಜಿ.ಕೆ.ಗೋವಿಂದ ರಾವ್ ಅವರಿಂದ ಗೌರವ ಸ್ವೀಕರಿಸುವ ಸನ್ನಿವೇಶದ ಚಿತ್ರೀಕರಣ. ಶಾಟ್ ಓಕೆ ಆದ ತಕ್ಷಣ ಕಟ್ ಹೇಳಿದ್ದು ಜೆ.ಜಿ.ಕೃಷ್ಣ. ಕ್ಯಾಮೆರಾ ಹಿಡಿದಿದ್ದವರೂ ಅವರೇ. ಚಿತ್ರದ ಹೆಸರು ‘ಮಾಸ್’. ಹಾಗಾಗಿ ಇದನ್ನು ‘ಕೃಷ್ಣನ್ ಮಾಸ್ ಸ್ಟೋರಿ’ ಎನ್ನಬಹುದು.
‘ಐತಲಕ್ಕಡಿ’ ಚಿತ್ರ ಸೋಲುಂಡ ಮೇಲೆ ಜೆ.ಜಿ.ಕೃಷ್ಣ ನಿರ್ದೇಶನಕ್ಕೆ ಕಾಲಿಡುತ್ತಿರುವ ಚಿತ್ರವಿದು.ಈ ಬಾರಿ ಯಶಸ್ಸು ಸಿಕ್ಕೇ ಸಿಗುತ್ತದೆಂಬುದು ಅವರ ದಿವ್ಯ ವಿಶ್ವಾಸ. ಮಾಸ್ ಎಂಬುದು ಜನಸಮೂಹವನ್ನು ಸೂಚಿಸುತ್ತದೆನ್ನುವ ಕೃಷ್ಣ, ಅವರನ್ನು ಕಾಪಾಡುವುದು, ನಿಯಂತ್ರಿಸುವುದು ಪೊಲೀಸರಿಗೆ ಎಷ್ಟು ಕಷ್ಟ ಎಂಬುದನ್ನು ತೆರೆಮೇಲೆ ತೋರಿಸಲು ಹೊರಟಿದ್ದಾರೆ.
ಚಿತ್ರದ ಮೇಲೆ ಹಣ ಹೂಡುತ್ತಿರುವವರು ಗಣೇಶ್. ಮಲೇಷ್ಯಾ, ಥಾಯ್ಲೆಂಡ್ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಅವರು ಈಗಾಗಲೇ ಆರಂಭಿಸಿದ್ದಾರಂತೆ.ನಾಯಕ ಆದಿತ್ಯ ಖಾಕಿ ತೊಟ್ಟಿರುವ ಮೊದಲ ಚಿತ್ರ ಇದು. ನಿಜ ಬದುಕಿನಲ್ಲಿ ಬಿ.ಬಿ.ಅಶೋಕ್ ಕುಮಾರ್ ತರಹದ ಪೊಲೀಸರನ್ನು ಕಂಡು ಪ್ರಭಾವಿತರಾಗಿರುವುದಾಗಿ ಹೇಳಿದ ಅವರು, ಆ ಮ್ಯಾನರಿಸಂ ಅನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.ನಾಯಕಿ ಡೈಸಿ ಬೋಪಣ್ಣ ತಮ್ಮದು ದೇವರಾಜ್ ಅವರ ಮಗಳ ಪಾತ್ರ, ಸತ್ವ ಇರುವ ಪಾತ್ರ ಎಂದಷ್ಟೇ ಹೇಳಿ ಸುಮ್ಮನಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.