ಪಂಚರಂಗಿ
ಕ್ರಾಂತಿವೀರ್~ ಚಿತ್ರದ ನಾನಾ ಪಾಟೇಕರ್ ಪಾತ್ರವನ್ನು ಮರೆಯಲು ಸಾಧ್ಯವೇ? ಈಗ ನಾನಾ ಮತ್ತೊಮ್ಮೆ ಕ್ರಾಂತಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ, ಮರಾಠಿ ಚಿತ್ರಕ್ಕಾಗಿ.
ಬ್ರಿಟಿಷ್ ರಾಜ್ ಮೊದಲು ನೇಣಿಗೇರಿಸಿದ ಕ್ರಾಂತಿಕಾರಿ ಉಮ್ಮಾಜಿ ನಾಯ್ಕ ಪಾತ್ರವನ್ನು ನಾನಾ ಪಾಟೇಕರ್ ನಿರ್ವಹಿಸಲಿದ್ದಾರೆ ಎಂದು ಚಿತ್ರ ನಿರ್ದೇಶಕ ರಾಜ್ ಘುಮತ್ಕರ್ ಹೇಳಿದ್ದಾರೆ.
ಡಕಾಯಿತನಾಗಿದ್ದ ಉಮ್ಮಾಜಿ ನಂತರ ರಾಜ್ ವಿರುದ್ಧ ಬಂಡೆದ್ದ ರಮೋಶಿ ಜನಾಂಗದ ನಾಯಕನಾಗುತ್ತಾನೆ. ಮರಾಠಾ ಆಳ್ವಿಕೆ ಕೊನೆಗೊಂಡ ನಂತರ ಬ್ರಿಟಿಷ್ ದಬ್ಬಾಳಿಕೆಯನ್ನು ಎದುರಿಸಲು ತನ್ನದೇ ಸಣ್ಣ ಸೇನೆಯನ್ನೂ ಕಟ್ಟಿರುತ್ತಾನೆ ಉಮ್ಮಾಜಿ.
ಬ್ರಿಟಿಷರ ದೌರ್ಜನ್ಯ ತಡೆಯಲಾಗದೇ ಸ್ಥಳೀಯರು ಉಮ್ಮಾಜಿಗೆ ಬೆಂಬಲ ಸೂಚಿಸುತ್ತಾರೆ. ಉಮ್ಮಾಜಿಯನ್ನು ಸೆರೆಹಿಡಿಯಲು ಬ್ರಿಟಿಷ್ ಸರ್ಕಾರವು ಆ ಕಾಲದಲ್ಲಿ 5000 ರೂಪಾಯಿಗಳ ಬಹುಮಾನ ಘೋಷಿಸುತ್ತದೆ. ನಂತರ ಉಮ್ಮಾಜಿಯನ್ನು ಸೆರೆ ಹಿಡಿದು ಪುಣೆಯಲ್ಲಿ ನೇಣಿಗೇರಿಸಲಾಗುತ್ತದೆ.
ಭಾರತೀಯ ಸ್ವತಂತ್ರ ಸಂಗ್ರಾಮದಲ್ಲಿ ಮೊದಲು ನೇಣಿಗೇರಿದ ಕ್ರಾಂತಿಕಾರಿ ಎಂಬ ಹೆಸರು ಉಮ್ಮಾಜಿಗೆ ದೊರೆಯುತ್ತದೆ. ಇದು ಉಮ್ಮಾಜಿ ನಾಯಕ್ ಕತೆ ಎಂದು ರಾಜ್ ವಿವರಿಸಿದ್ದಾರೆ.
ಜೊತೆಗೆ ಇದೇನು ಅತಿ ದೊಡ್ಡ ಬಜೆಟ್ನ ಚಿತ್ರವೇನೂ ಅಲ್ಲ. ಆದರೂ ನಾನಾ ಒಪ್ಪಿಕೊಂಡಿರುವುದೇ ಚಿತ್ರದ ಹೆಗ್ಗಳಿಕೆಯಾಗಲಿದೆ ಎಂದು ಘುಮತ್ಕರ್ ಹೇಳಿದ್ದಾರೆ.
ಘುಮತ್ಕರ್ ಅವರ ಮರಾಠಿ ಚಿತ್ರ `ಭಾನಾಮತಿ~ ಸಹ ಯಶಸ್ವಿಯಾಗಿದ್ದು, ಈ ಚಿತ್ರವನ್ನು ನಾನಾ ಪ್ರಶಂಸೆ ಮಾಡಿದ್ದರು. ಈಗ ಅವರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದು ರಾಜ್ ಹೇಳಿದ್ದಾರೆ.ನಾನಾ ಅಭಿಮಾನಿಗಳೀಗ ಕ್ರಾಂತಿಕಾರಿಯ ಇನ್ನೊಂದು ರೂಪವನ್ನು ನೋಡಲು ಸಿದ್ಧರಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.