ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಿ. ವೇಣು ಭಾರಧ್ವಾಜ್ ಹಾಗೂ ಸಿ. ರಾಜ್ ಭಾರಧ್ವಾಜ್ ಅವರು ನಿರ್ಮಿಸುತ್ತಿರುವ `ಜ್ಞಾನಂ’ ಮಕ್ಕಳ ಚಿತ್ರ ಬಾಣಸವಾಡಿಯ ಶ್ರೀಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಆರಂಭವಾಯಿತು.
ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಿರ್ಮಾಪಕ ವೇಣು ಭಾರಧ್ವಾಜ್ ಅವರ ತಾಯಿ ವಸಂತ ಕ್ಲಾಪ್ ಮಾಡಿದರು. ಸಹೋದರ ರಾಜ್ ಭಾರಧ್ವಾಜ್ ಕ್ಯಾಮೆರಾ ಚಾಲನೆ ಮಾಡಿದರು.
ವರದರಾಜ್ ವೆಂಕಟಸ್ವಾಮಿ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗೀತರಚನೆ ಮಾಡಿರುವ ಅವರು ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ‘ನನ್ನ ಪ್ರಕಾರ’ ಚಿತ್ರಕ್ಕೆ ಸಹಾಯಕರಾಗಿ ದುಡಿದ ಅನುಭವ ಇರುವ ಅವರಿಗೆ ಇದು ಪ್ರಥಮ ನಿರ್ದೇಶನದ ಚಿತ್ರ. ಸಂತೋಷ್ ದಯಾಳನ್ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ.
ಸಮಾಜದ ಮೇಲೆ ಪರಿಣಾಮ ಬೀರುವ ಕಥಾ ಹಂದರ ಹೊಂದಿರುವ ಚಿತ್ರ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶೈಲಶ್ರೀ ಸುದರ್ಶನ್, ಪ್ರಣಯ ಮೂರ್ತಿ, ಜ್ಯೋತಿ ಮೂರೂರ, ಮಾಸ್ಟರ್ ಧ್ಯಾನ್, ಮಾಸ್ಟರ್ ರೋಹಿತ್, ಸಂತೋಷ್ ಆರ್ಯ, ರಾಧಿಕಾ ಎ. ಶೆಟ್ಟಿ, ಸುಕುಮಾರ್ ಕೌಂಡಿನ್ಯ, ರಾಮರಾವ್ ತಾರಾಗಣದಲ್ಲಿದ್ದಾರೆ. ⇒v
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.