ಒಂದಲ್ಲ ಎರಡಲ್ಲ, ಕನ್ನಡ ಸೇರಿದಂತೆ ವಿವಿಧ ಭಾಷೆಯ ಸುಮಾರು ಹತ್ತು ಚಿತ್ರಗಳು ಆಗಸ್ಟ್ 9ರಂದು ತೆರೆಕಾಣುತ್ತಿವೆ. ಹೀಗಾಗಿ `ಬರ್ಫಿ'ಯ ಸಿಹಿ ಸವಿಯಲು ಒಂದೆರಡು ವಾರ ಕಾಯಬೇಕಾಗಿದೆ. ಪರಭಾಷಾ ಚಿತ್ರಗಳ ಪೈಪೋಟಿ ಮತ್ತು ಚಿತ್ರಮಂದಿರಗಳ ಕೊರತೆ ಚಿತ್ರತಂಡವನ್ನು ಕಾಡಿದೆ. ಎರಡು ವಾರ ತಡವಾದರೆ ನಷ್ಟವೇನಿಲ್ಲ ಎಂಬ ನಂಬಿಕೆ `ಬರ್ಫಿ' ಚಿತ್ರತಂಡದ್ದು.
ಹಾಡುಗಳ ಯಶಸ್ಸು ನಿರ್ದೇಶಕ ಶೇಖರ್ಗೆ ಉತ್ಸಾಹ ತುಂಬಿದೆ. ಅವರ ಮಾತುಗಳು ಹಾಡುಗಳ ಗೆಲುವನ್ನೇ ಜಪಿಸುತ್ತಿದ್ದವು. ಸೆಟ್ಗಳನ್ನು ಹಾಕದೆ, ಹೊಸ ಹೊಸ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಡುಗಳ ಮರುಮುದ್ರಣ ಕಾರ್ಯವನ್ನು ಮತ್ತಷ್ಟು ಸೊಗಸಾಗಿ ನಿರ್ವಹಿಸಿದ್ದಾರಂತೆ. ಹಿನ್ನೆಲೆ ಸಂಗೀತದ ಮುಂದೆ ಹಾಡುಗಳೂ ಮಂಕೆನಿಸುತ್ತವೆ ಎನ್ನುವುದು ಶೇಖರ್ ಅಭಿಪ್ರಾಯ. `ತುಸು ಹೆಚ್ಚೇ ನಿರೀಕ್ಷೆಯಿಟ್ಟುಕೊಂಡು ಚಿತ್ರಮಂದಿರಕ್ಕೆ ಬನ್ನಿ, ಸಿನಿಮಾ ಖಂಡಿತಾ ನಿರಾಸೆ ಉಂಟುಮಾಡುವುದಿಲ್ಲ' ಎಂದರು ಶೇಖರ್.
ನಿರ್ದೇಶಕರ ಹಿಂದಿನ ಚಿತ್ರಗಳು ನಟ ದಿಗಂತ್ಗೆ ಇಷ್ಟವಾಗಿರದಿದ್ದರೂ `ಬರ್ಫಿ'ಯ ಕಥೆ ಕೇಳಿದ ಬಳಿಕ ಅವರಲ್ಲಿ ವಿಶ್ವಾಸ ಮೂಡಿತಂತೆ. `ಚಿತ್ರ ಚೆನ್ನಾಗಿ ಮೂಡಿಬಂದಿದೆ' ಎಂಬ ಖುಷಿ ಅವರದು.
ಚಿತ್ರದ ಬಿಡುಗಡೆಗೆ ಸಹಕರಿಸುತ್ತಿರುವುದು ನಿರ್ಮಾಪಕ ಸೂರಪ್ಪ ಬಾಬು. ಸ್ವತಃ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದರೂ, ಚಿತ್ರ ನಿರ್ಮಾಣದಲ್ಲಿ ಬಿಜಿ ಆಗಿರುವುದರಿಂದ ಆ ಹೊಣೆಯನ್ನು ಬೇರೊಬ್ಬರಿಗೆ ವರ್ಗಾಯಿಸಿದ್ದಾರೆ.
`ಚಿತ್ರರಂಗದಲ್ಲಿನ ತಮ್ಮ ಪ್ರಭಾವ ಬೀರಿ ಉತ್ತಮ ಚಿತ್ರಮಂದಿರಗಳನ್ನು ಕೊಡಿಸಬಹುದಾಗಿತ್ತು. ಆದರೆ ಅದು ಸಿನಿಮಾ ಯಶಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು' ಎನ್ನುವ ಅವರು, `ಬರ್ಫಿ'ಯನ್ನು ಒಂದೆರಡು ವಾರ ತಡವಾಗಿ ತೆರೆ ಕಾಣಿಸುವಂತೆ ಸಲಹೆ ನೀಡಿದರಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.