ADVERTISEMENT

ದೇವಕನ್ನಿಕೆ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST
ದೇವಕನ್ನಿಕೆ ಮರೀಚಿಕೆ
ದೇವಕನ್ನಿಕೆ ಮರೀಚಿಕೆ   

`ಪ್ರೇಮದಲ್ಲಿ ನಿರಾಸೆಯಾದಾಗ ತ್ಯಾಗ ಮನೋಭಾವದಿಂದ ಬಾಳಬೇಕು~ ಎಂಬ ಸಂದೇಶ ಹೊತ್ತು ಬರಲಿರುವ ಸಿನಿಮಾ `ಏಂಜಲ್~. ಗೀತಪ್ರಿಯ, ವೈ.ಆರ್.ದಾಸ್, ಸುಂದರನಾಥ ಸುವರ್ಣ ಅವರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವುಳ್ಳ ದಯಾಕರ್ ವಿ. ರಾವ್ ಈ ಚಿತ್ರದ ನಿರ್ದೇಶಕರು.

`ಏಂಜಲ್~ ಅಂದರೆ ದೇವಕನ್ಯೆ. ಯಾರಿಗೂ ದಕ್ಕದ ದೇವತೆಯಿವಳು. ಮರೀಚಿಕೆಯಂಥ ದೇವಕನ್ಯೆಗಿಂತಲೂ ನಿಜವಾದ ಪ್ರೀತಿ ಮುಖ್ಯ ಎಂಬುದನ್ನು ಚಿತ್ರದಲ್ಲಿ ತೋರಿಸಲಿದ್ದೇವೆ. ಇದು ತ್ರಿಕೋನ ಪ್ರೇಮಕತೆ. ನಾಗಕಿರಣ್ ನಾಯಕ. ತುಶಾಲಿ ದಾಸ್ ಮತ್ತು ರೂಪಿಕಾ ನಾಯಕಿಯರು. ಸಿನಿಮಾದ ಕೊನೆಯಲ್ಲಿ ತಿರುವು ಇರುತ್ತದೆ.

ಆಗ ಬರುವ ಒಂದು ವಿಶೇಷ ಪಾತ್ರವನ್ನು ಅರ್ಜುನ್ ನಿರ್ವಹಿಸುತ್ತಿದ್ದಾರೆ. ಅವರು ನಿರ್ಮಾಪಕರ ಅಕ್ಕನ ಮಗ. ಮನರಂಜನೆ ನಮ್ಮ ಚಿತ್ರದ ಪ್ರಮುಖ ಉದ್ದೇಶ. ಚಿತ್ರ ಗೆದ್ದೇ ಗೆಲ್ಲುವ ವಿಶ್ವಾಸ ಇದೆ. 30 ದಿನಗಳಲ್ಲಿ ಚಿತ್ರೀಕರಣ ಮುಗಿಸುವೆವು~ ಎನ್ನುವ ನಿರ್ದೇಶಕರ ಮಾತಿನಲ್ಲಿ ಆತ್ಮವಿಶ್ವಾಸವಿತ್ತು.

`ಏಂಜಲ್~ ಎನ್ನುವ ಹೆಸರು ಅಂಜಲಿ ಮತ್ತು ನಂದಿನಿ ಎಂಬ ನಾಯಕಿಯರ ಹೆಸರುಗಳ ಮೊದಲ ಅಕ್ಷರಗಳ ಸಹಾಯದಿಂದ ಹೊಳೆಯಿತು ಎಂದು ಹೇಳಿದ್ದು, ಚಿತ್ರದ ನಾಯಕ ನಾಗಕಿರಣ್. `ಈ ಚಿತ್ರದಲ್ಲಿ ಗರ್ಲ್‌ಫ್ರೆಂಡಿಗೂ ಅತ್ತೆಯ ಮಗಳಿಗೂ ವ್ಯತ್ಯಾಸ ತಿಳಿಯಲಿದೆ. ಪ್ರಮುಖ ಸ್ಟಾರ್‌ಗಳ ಹೆಸರನ್ನು ಇಟ್ಟುಕೊಂಡು ಒಂದು ರ‌್ಯಾಪೋ ಸಾಂಗ್ ಮಾಡುತ್ತಿರುವುದು ವಿಶೇಷ~ ಎಂದವರು ಹೇಳಿದರು.

ತುಶಾಲಿ ದಾಸ್ ಅವರಿಗೆ ಇದು ಮೊದಲ ಸಿನಿಮಾ. ಮುಂಬೈನವರಾದ ಅವರು ನಸುನಗುತ್ತಲೇ, `ತುಂಬಾ ಎಕ್ಸೈಟ್ ಆಗಿರುವೆ. ಆಧುನಿಕ ಹುಡುಗಿಯ ಪಾತ್ರ ನನ್ನದು. ಚಿತ್ರ ಬ್ರೇಕ್ ನೀಡುವ ವಿಶ್ವಾಸ ಇದೆ~ ಎಂದರು.

`ಬಾಲ್ಯದ ಗೆಳೆಯರು ಜೀವನವಿಡೀ ಹೇಗಿರುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ನನ್ನದು ಬೋಲ್ಡ್ ಜೊತೆಗೆ ಜವಾಬ್ದಾರಿಯುತ ಪಾತ್ರ~ ಎನ್ನುವುದು ಮತ್ತೊಬ್ಬ ನಾಯಕಿ ರೂಪಿಕಾ ಚಿಲಿಪಿಲಿ.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮೋಹನ್ ಜುನೇಜಾ ಅವರಿಗಿದು ಸಂಭಾಷಣೆಕಾರರಾಗಿ 16ನೇ ಚಿತ್ರವಂತೆ. ಸಂಗೀತ ನಿರ್ದೇಶಕ ಅನಂತ ಆರ್ಯನ್ ಸ್ಥಳೀಯ ಗಾಯಕರಿಂದಲೇ ಹಾಡಿಸಿರುವುದಾಗಿ ನುಡಿದರು.

ನಿರ್ಮಾಪಕ ಗೋಕುಲ್ ರಘು ಅವರು ಈ ಮೊದಲ ಲೈಫ್‌ಸ್ಟೈಲ್~ ಎಂಬ ಸಿನಿಮಾ ಆರಂಭಿಸಿ, ಪಾಲುದಾರರ ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ತುಂಬು ಉತ್ಸಾಹದಿಂದ `ಏಂಜಲ್~ ಆರಂಭಿಸಿದ್ದಾರೆ. ಒಂದೂವರೆ ಕೋಟಿ ಬಜೆಟ್‌ನಲ್ಲಿ ಸಿನಿಮಾ ಪೂರ್ಣಗೊಳಿಸುವ ಯೋಜನೆ ಅವರದು. 

 ಶೇ 70ರಷ್ಟು ಬೆಂಗಳೂರಿನಲ್ಲಿ, ಉಳಿದ ದೃಶ್ಯಗಳನ್ನು ಭಟ್ಕಳ, ಚಿಕ್ಕಮಗಳೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಿರುವ ಚಿತ್ರತಂಡ ಗೀತೆಗಳಿಗೆ ಬ್ಯಾಂಕಾಕ್, ಸಿಂಗಾಪುರಕ್ಕೆ ಹಾರಲಿದೆ. 
           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.