`ಎಲ್ಲೆಲ್ಲೋ ಓಡುವ ಮನಸೇ.. ಯಾಕಿಂಥ ಹುಚ್ಚುಚ್ಚು ಮನಸೇ..~- ಈ ಹಾಡನ್ನು ನೋಡಿದಾಗ ಅಲ್ಲಿ ನೃತ್ಯ ನಿರ್ದೇಶಕರ ಅಗತ್ಯ ಏನಿದೆ? ಎಂಬ ಪ್ರಶ್ನೆ ಸುಳಿದು ಹೋಗುತ್ತದೆ.
`ಆದರೆ ಅಬ್ಬರದ ಹಾಡಿನಲ್ಲಿ ನೃತ್ಯ ನಿರ್ದೇಶಕರಿಗೆ ಇರುವಷ್ಟೇ ಪ್ರಾಮುಖ್ಯತೆ ಇಂಥ ನಿರ್ದಿಷ್ಟ ವಿಚಾರ ಇರುವ ಹಾಡುಗಳಿಗೂ ಇರುತ್ತದೆ~ ಎನ್ನುತ್ತಾರೆ ಮುರಳಿ. ಪ್ರಸ್ತುತ ಅವರು ಇಂಥ ಮಾಧುರ್ಯ ತುಂಬಿದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ.
`ಮೆಲೋಡಿ ಹಾಡುಗಳಿಗೆ ನೃತ್ಯ ನಿರ್ದೇಶಕರ ಅಗತ್ಯ ಏನಿದೆ ಎನ್ನುತ್ತಾರೆ. ಆದರೆ ಒಂದು ಹಾಡನ್ನು ನಮಗೆ ವಹಿಸಿದ ಮೇಲೆ ಅದು ಹೇಗಿದ್ದರೂ ಅದಕ್ಕೆ ಅಗತ್ಯ ಇರುವ ಕಾಸ್ಟ್ಯೂಮ್ನಿಂದ ಹಿಡಿದು ಹಾಡು ಹೇಗೆ ರೂಪು ತಳೆಯಬೇಕು ಎನ್ನುವತನಕ ನಮ್ಮ ಸಹಕಾರ ಇರುತ್ತದೆ~ ಎನ್ನುತ್ತಾರೆ ಮುರಳಿ.
ಮುರಳಿ ಅವರ ಊರು ಬೆಂಗಳೂರು. ಓದಿದ್ದು ಪಿಯುಸಿ. ಚಿಕ್ಕಂದಿನಿಂದ ಇದ್ದ ನೃತ್ಯ ಮಾಡುವ ಅವರ ಹವ್ಯಾಸವನ್ನು ಕುಟುಂಬ ಬೆಂಬಲಿಸಿತು. ಕನಸುಗಳನ್ನು ಹೊತ್ತ ಅವರು ಗಾಂಧಿನಗರದ ಹಾದಿ ಹಿಡಿದರು.
ಮೊದಲ ಬಾರಿಗೆ `ಸಿಂಹದ ಮರಿ~ ಚಿತ್ರದ ಹಾಡಿನಲ್ಲಿ ಸಹನರ್ತಕನಾಗಿ ಹಾಜರಿ ಹಾಕಿದರು. ಫೈವ್ಸ್ಟಾರ್ ಗಣೇಶ್, ಮದನ್ ಹರಿಣಿ, ರಘು ಮುಂತಾದವರ ಬಳಿ ಸಹ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದರು. ಇದೀಗ ಸ್ವತಂತ್ರವಾಗಿ ನೃತ್ಯ ನಿರ್ದೇಶನದ ನೇತೃತ್ವ ವಹಿಸಿಕೊಂಡಿರುವ ಅವರಿಗೆ ವಿಭಿನ್ನ ರೀತಿಯ ನೃತ್ಯ ಪ್ರಯೋಗ ಮಾಡುವಾಸೆ.
ಸಿನಿಮಾ ನೃತ್ಯ ನಿರ್ದೇಶನದೊಂದಿಗೆ `ಡಾನ್ಸ್ ವರ್ಲ್ಡ್~ ಹೆಸರಿನ ನೃತ್ಯ ಶಾಲೆಯನ್ನು ನಿರ್ವಹಿಸುತ್ತಿರುವ ಮುರಳಿ, ಅಲ್ಲಿ ಇಂದಿನ ಟ್ರೆಂಡ್ಗೆ ತಕ್ಕ ಡಾನ್ಸ್ ಕಲಿಸುತ್ತಾರಂತೆ. ಸಿನಿಮಾದಲ್ಲೂ ಅವಕಾಶಗಳನ್ನು ಪಡೆಯುತ್ತಾ ಸಾಗುತ್ತಿರುವ ಅವರು ಸದ್ಯಕ್ಕೆ `ಗೋವಿಂದಾಯ ನಮಃ~ ಚಿತ್ರದ `ಪ್ಯಾರ್ಗೆ ಆಗ್ಬುಟ್ಟೈತೆ..~ ಹಾಡು ಯಶಸ್ವಿಯಾದ ಗುಂಗಿನಲ್ಲಿದ್ದಾರೆ.
`ಇದುವರೆಗೂ ಸಾಕಷ್ಟು ಕಾನ್ಸೆಪ್ಟ್ ಇರುವ ಹಾಡುಗಳನ್ನು ಮಾಡಿದ್ದರೂ `ಪ್ಯಾರ್ ಆಗ್ಬುಟ್ಟೈತೆ..~ಗೆ ಸಿಕ್ಕ ಪ್ರಶಂಸೆ ಮತ್ಯಾವುದಕ್ಕೂ ಸಿಕ್ಕಿಲ್ಲ. ಇದರಿಂದ ಅವಕಾಶವೇನೂ ಹೆಚ್ಚಿಲ್ಲ. ಆದರೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ~ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
`ಯಶವಂತ್~ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಮುರಳಿ ಮೊದಲ ಅವಕಾಶ ನೀಡಿದ ನಿರ್ದೇಶಕ ದಯಾಳ್ ಅವರಿಗೆ ಆಭಾರಿ ಎನ್ನುತ್ತಾರೆ. ನಂತರ `ಅಂಬಾರಿ~, `ರಾಕಿ~, `ಮಳೆಯಲಿ ಜೊತೆಯಲಿ~, `ಸಂಗಮ~, `ಸರ್ಕಸ್~ ಮುಂತಾದ ಚಿತ್ರಗಳ ಹಾಡುಗಳಿಗೆ ಕೆಲಸ ಮಾಡಿದ್ದಾರೆ.
ಯೋಗರಾಜ ಭಟ್ಟರ `ಮನಸಾರೆ~ ಮತ್ತು `ಪಂಚರಂಗಿ~ ಚಿತ್ರದ `ಲೈಫು ಇಷ್ಟೇನೆ..~ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ನಂತರ ಅವಕಾಶಗಳು ಜಾಸ್ತಿಯಾದವು ಎನ್ನುವ ಮುರಳಿ ಅವರಿಗೆ ಟಪ್ಪಾಂಗುಚಿ ಹಾಡುಗಳನ್ನು ನಿರ್ದೇಶಿಸುವುದೆಂದರೆ ಬಲು ಇಷ್ಟ.
`ಹಣ ಕೊಡದಿದ್ದರೂ ಸರಿಯೇ ಕ್ರಿಯಾಶೀಲವಾಗಿ ಕೆಲಸ ಮಾಡಲು ಅವಕಾಶ ನೀಡಿದರೆ ಮತ್ತು ಸೆಟ್ನಲ್ಲಿ ಗೌರವ ಕೊಟ್ಟರೆ ಸಾಕು~ ಎನ್ನುವ ಮುರಳಿ ಅವರಿಗೆ `ರಾಕಿ~ ಚಿತ್ರದ ಹಾಡುಗಳಿಗೆ ಮೈನವಿರೇಳಿಸುವ ನೃತ್ಯ ನಿರ್ದೇಶನ ಮಾಡಿದ್ದು ಇಷ್ಟವಾಗಿದೆ.
ಬಿಡುಗಡೆಯಾಗಬೇಕಿರುವ `ಡ್ರಾಮಾ~, `ಜಾನೂ~ ಚಿತ್ರಗಳ ಗೀತೆಗಳಿಗೆ ಮತ್ತು `ಟೀನೇಜ್~ ಚಿತ್ರದ ನೀರೊಳಗಿನ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. `ಎಲ್ಲಾ ರೀತಿಯ ಹಾಡುಗಳಿಗೂ ಮೈಕುಣಿಸಿ ತಣಿಯಬೇಕೆಂಬ ಆಸೆ ನನ್ನದು.
ಕೆಲವೊಮ್ಮೆ ನಾಯಕನ ಮಿತಿಯನ್ನು ಅನುಸರಿಸಿ ನಾವು ನಡೆಯಬೇಕಿರುತ್ತದೆ. ಸೆಟ್ನಲ್ಲೂ ಹೊಂದಾಣಿಕೆ ಮಾಡಿಕೊಳ್ಳಬೇಕಿರುತ್ತದೆ. ಕಡಿಮೆ ಅವಧಿಯಲ್ಲಿ ಕೆಲಸ ಮಾಡಿ ಎಂದಾಗ ನಮ್ಮ ಕ್ರಿಯಾಶೀಲತೆಗೆ ಧಕ್ಕೆಯಾಗುತ್ತದೆ~ ಎನ್ನುತ್ತಾರೆ ಮುರಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.