ಬಾಗಲಕೋಟೆ: ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರ ಮದುವೆ ನಿಶ್ಚಿತಾರ್ಥ ಸಮಾರಂಭ ಗುರುವಾರ ಇಲ್ಲಿನ ನವನಗರದ ಹರಿಪ್ರಿಯಾ ಹೋಟೆಲ್ನಲ್ಲಿ ಸಂಭ್ರಮದಿಂದ ನೆರವೇರಿತು.
ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಜೋಡಿಯ ನಿಶ್ಚಿತಾರ್ಥ ನಡೆಯಿತು. ಕುಟುಂಬಸ್ಥರು, ಆಪ್ತರು ಹಾಗೂ ಆಹ್ವಾನಿತ ಅತಿಥಿಗಳು ಇದಕ್ಕೆ ಸಾಕ್ಷಿಯಾದರು. ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ನವರಾಗಿರುವ ಪವನ್, ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದು, ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಿರ್ದೆಶಕರಲ್ಲೊಬ್ಬರಾಗಿದ್ದಾರೆ.
ಇನ್ನೂ ಬಾಗಲಕೋಟೆಯ ಹುಡುಗಿ ಅಪೇಕ್ಷಾ ಪುರೋಹಿತ್ ಅವರು ಟಿ.ಎನ್.ಸೀತಾರಾಂ ಅವರ ಕಾಫಿತೋಟ ಸಿನಿಮಾದ ನಾಯಕಿಯಾಗಿದ್ದು, ಕಿರುತೆರೆಯ ಅನೇಕ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ತಮಿಳಿನ ಧಾರವಾಹಿಯೊಂದರಲ್ಲಿ ಅಭಿನಯಿಸುತ್ತಿದ್ದಾರೆ.
2018ರ ಆಗಸ್ಟ್ನಲ್ಲಿ ಬಾಗಲಕೋಟೆಯಲ್ಲಿಯೇ ಮದುವೆ ನಡೆಯಲಿದೆ. ಮನೆಯವರು ಸೇರಿ ನಿಶ್ಚಯ ಮಾಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶುಭಕೋರಿದ ಜಿ.ಪಂ ಅಧ್ಯಕ್ಷೆ: ನಿಶ್ಚಿತಾರ್ಥ ಸಮಾರಂಭಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಿರ್ಮಾಪಕ ಘನಶ್ಯಾಂ ಭಾಂಡಗೆ ಭೇಟಿ ನೀಡಿ ಜೋಡಿಗೆ ಶುಭಾಶಯ ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.