ADVERTISEMENT

ಪವರ್‌ –ಟವರ್‌ ಯುಗಳ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಪುನೀತ್ ರಾಜ್‌ಕುಮಾರ್‌ಗೆ ‘ಪವರ್ ಸ್ಟಾರ್’ ಬಿರುದು ಕೊಟ್ಟಿದ್ದು ಯಾರು? ಏಕೆ ಕೊಟ್ಟಿದ್ದು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಜಯಂತ್ ಪರಾಂಜಿ ನಿರ್ದೇಶನದ, ‘ನಿನ್ನಿಂದಲೇ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ.

ಚಿತ್ರದ ನಾಯಕ ಪುನೀತ್ ಜೊತೆ ವೇದಿಕೆ ಹಂಚಿಕೊಂಡಿದ್ದ ಅವರ ಸಹೋದರ ಶಿವರಾಜಕುಮಾರ್, ಬಾಲ್ಯದ ದಿನಗಳಲ್ಲಿನ ತಮ್ಮನ ನಟನೆಯನ್ನು ನೆನಪಿಸಿಕೊಂಡರು. ‘‘ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ನಟಿಸಲು ನನಗೆ ಬಣ್ಣ ಹಚ್ಚಿ ವಿಗ್‌ ಹಾಕಿದ್ದರು. ನಟನೆ ಬೇಡ ಎಂದು ವಿಗ್ ಕೆತ್ತಿಸೆದಿದ್ದೆ. ನಾನು ಅಚಾನಕ್ಕಾಗಿ ನಟನಾದವನು. ಆದರೆ ಪುನೀತ್ ನನ್ನ ಹಾಗಲ್ಲ. ‘ಭಾಗ್ಯವಂತ’ ಚಿತ್ರದಲ್ಲಿ ಬಾಲನಟನಾಗಿ ಜನಮನವನ್ನು ಗೆದ್ದವನು. ಚಿಕ್ಕಂದಿನಿಂದಲೇ ಅದ್ಭುತವಾದ ನಟನೆಯನ್ನು ತೋರಿದವನು. ಅವನ ನಟನೆಯಲ್ಲಿ ಪವರ್ ಇದೆ... ಆ ಕಾರಣಕ್ಕೆ ನಾನೇ ಅವನಿಗೆ ‘ಪವರ್ ಸ್ಟಾರ್’ ಬಿರುದು ಕೊಟ್ಟಿದ್ದು’’ ಎಂದು ಶಿವಣ್ಣ ಹೇಳಿದರು.

‘ನಿನ್ನಿಂದಲೇ’ ಸಿನಿಮಾಕ್ಕೆ ಶುಭ ಹಾರೈಸಿದ ಶಿವರಾಜಕುಮಾರ್– ಪವರ್ ಜೊತೆ ಟವರ್ (ಎರಿಕಾ ಫರ್ನಾಂಡಿಸ್) ಸಹಾ ಇರುವುದರಿಂದ ಈ ಸಿನಿಮಾ ಟವರ್ ರೀತಿಯೇ ಎತ್ತರಕ್ಕೆ ಸಾಗುತ್ತದೆ ಎಂದು ಆಶಿಸಿದರು.

‘ಪವರ್ ಸ್ಟಾರ್’ನ ಖದರ್ ಏನೆಂದು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಚೆನ್ನಾಗಿ ಮೂಡಿದೆ ಎಂದು ಸಂಕ್ಷಿಪ್ತವಾಗಿ ಮಾತು ಮುಗಿಸಿದರು ನಿರ್ದೇಶಕ ಜಯಂತ್ ಪರಾಂಜಿ. ಕನ್ನಡದಲ್ಲಿ ತಮಗೆ  ದೊರೆತ ಮೊದಲ ಅವಕಾಶದ ಬಗ್ಗೆ ಅವರಲ್ಲಿ ಖುಷಿ ಮತ್ತು ಭರವಸೆಯಿತ್ತು. 

ತೆಲುಗಿನಲ್ಲಿ ಖ್ಯಾತರಾಗಿರುವ ನಿರ್ದೇಶಕ ಪರಾಂಜಿ ಅವರ ತಾಯಿಯ ತವರು ಬೆಂಗಳೂರು. ಅವರ ಕನ್ನಡದೊಂದಿಗೆ ನಂಟು ಕುರಿತು ಚಿತ್ರ ಸಾಹಿತಿ ಕವಿರಾಜ್ ಮಾತನಾಡಿದರು. ತೆಲುಗಿನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿದರೂ ಅವರ ತಾಯಿ ಯಾವತ್ತೂ ‘ಏನು ಮಾಡುತ್ತಿದ್ದೀಯ? ಯಾವ ಚಿತ್ರ ನಿರ್ದೇಶಿಸುತ್ತಿದ್ದೀಯ?’ ಎಂದು ಕೇಳಿರಲಿಲ್ಲವಂತೆ. ಆದರೆ ಕನ್ನಡದ ಮೊದಲ ಸಿನಿಮಾ ನಿರ್ದೇಶನದಲ್ಲಿ ತೊಡಗುತ್ತಿದ್ದಂತೆ, ಆಗಾಗ್ಗೆ ಈ ಬಗ್ಗೆ ವಿಚಾರಿಸುತ್ತಿದ್ದರಂತೆ.

ಚಿತ್ರೀಕರಣದ ಸಂದರ್ಭವನ್ನು ಮೆಲುಕುಹಾಕಿದ ನಾಯಕ ಪುನೀತ್, ಚಿತ್ರತಂಡದ ಸಹಕಾರವನ್ನು ಮೆಚ್ಚಿಕೊಂಡರು. ನಾಯಕಿ ಎರಿಕಾ, ಪುನೀತ್ ಅವರ ನಟನೆಯನ್ನು ಅದ್ಭುತ ಎಂದರು.

ಅಂದಹಾಗೆ, ‘ನಿನ್ನಿಂದಲೇ’ ಚಿತ್ರದಲ್ಲಿ ಆರು ಹಾಡುಗಳಿದ್ದು, ಮಣಿ ಶರ್ಮ ಸಂಗೀತ ನೀಡಿದ್ದಾರೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು, ನಿರ್ಮಾಪಕ ಚಿನ್ನೇಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.