ADVERTISEMENT

`ಬ್ರಹ್ಮ'ನ ವಿದೇಶ ಯಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:59 IST
Last Updated 4 ಜುಲೈ 2013, 19:59 IST

ಲೇಷ್ಯಾ ಎಂಬ ಸೊಬಗಿನ ಬೀಡು, ಅಲ್ಲಿ ಕಂಡ ಅಚ್ಚರಿ, ಅನುಭವಗಳನ್ನು ವರ್ಣಿಸಲು ತುದಿಗಾಲಲ್ಲಿ ನಿಂತಿದ್ದರು ನಿರ್ದೇಶಕ ಆರ್. ಚಂದ್ರು. ಹದಿನೈದು ದಿನಗಳ ಮಲೇಷ್ಯಾ ಯಾತ್ರೆಯ ಬಳಿಕ `ಬ್ರಹ್ಮ' ಸ್ವದೇಶಕ್ಕೆ ಮರಳಿದ್ದಾನೆ. ಚಂದ್ರು ವಿವರಣೆಯಲ್ಲಿ ಅವರ ಚಿತ್ರೀಕರಣದ ಅನುಭವವೇ ಒಂದು ಆಕ್ಷನ್ ಸಿನಿಮಾದಂತೆ ಕಂಡಿತು.

ಛಾಯಾಗ್ರಾಹಕ ಶೇಖರ್ ಚಂದ್ರು ಕೂದಲೆಳೆಯಲ್ಲಿ ಸಾವಿನಿಂದ ಪಾರಾಗಿದ್ದು, ರವಿವರ್ಮ ಜೀವ ಲೆಕ್ಕಿಸದೆ ಸ್ಟಂಟ್ ಮಾಡಿದ್ದು, ವಾಹನದಡಿಗೆ ಸಿಲುಕಿ ಬೆಲೆಬಾಳುವ ಕ್ಯಾಮೆರಾ ಪುಡಿಪುಡಿಯಾಗಿದ್ದು ಇತ್ಯಾದಿ ಘಟನೆಗಳನ್ನು ಹಂಚಿಕೊಳ್ಳುವ ತವಕ ಅವರಲ್ಲಿತ್ತು. ಚಿತ್ರೀಕರಣಕ್ಕಾಗಿಯೇ ಇಡೀ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಿಸುವುದರ ಜೊತೆಗೆ ಭದ್ರತೆಯನ್ನೂ ನೀಡಿದ ಅಲ್ಲಿನ ಪೊಲೀಸರ ದಕ್ಷತೆ ಕುರಿತ ಮಾತು ಉದ್ದವಾಗಿತ್ತು.

ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಿದ್ದ ಚಂದ್ರುಗೆ `ಪುತ್ರಜಯ' ಎಂಬ ನಗರದ ಬಗ್ಗೆ ಹೇಳಿದ್ದು ನಾಯಕ ಉಪೇಂದ್ರ. ಮಲೇಷ್ಯಾದ ಭವಿಷ್ಯದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿರುವ ನಗರವದು. ದುಬಾರಿಯಾದರೂ ಅದು ಅದ್ಭುತ ನಗರಿ ಎನ್ನುವುದು ಚಿತ್ರತಂಡದ ಬಣ್ಣನೆ.

ಜನರಿಗೆ ಸಿನಿಮಾವನ್ನು ತಲುಪಿಸುವ ಕಲೆಯನ್ನು ಚಂದ್ರು ಅವರಿಂದ ಕಲಿತೆ ಎಂದರು ಉಪೇಂದ್ರ. ನಿಮ್ಮ ಸಿನಿಮಾ ಯಾವಾಗ ಶುರು ಎಂದು ಕೇಳುತ್ತಿದ್ದ ಜನ `ಬ್ರಹ್ಮ' ಶುರುವಾಗುತ್ತಿದ್ದಂತೆಯೇ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿರುವುದು ಅವರಲ್ಲಿ ಅಚ್ಚರಿ ಮೂಡಿಸಿದೆ.

ನಟಿ ಪ್ರಣೀತಾ `ಬ್ರಹ್ಮ' ಚಿತ್ರವನ್ನು ಹಾಲಿವುಡ್ ಚಿತ್ರಗಳಿಗೆ ಹೋಲಿಸಿದರು. ಸಿನಿಮಾ ಕಥೆ ಮತ್ತು ಸನ್ನಿವೇಶಗಳನ್ನು ಸೆರೆಹಿಡಿದ ಬಗೆ ಅವರ ಆ ಭಾವ ಮೂಡಿಸಿದೆ. ಒತ್ತಡದ ನಡುವೆಯೂ ತಾಳ್ಮೆಯಿಂದ, ಯಾವುದಕ್ಕೂ ರಾಜಿಯಾಗದೆ ಅಂದುಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನಿರ್ದೇಶಕ ಚಂದ್ರು ಅವರನ್ನು ಪ್ರಣೀತಾ `ಪರ್ಫೆಕ್ಷನಿಸ್ಟ್' ಎಂದು ಬಣ್ಣಿಸಿದರು. ದೃಶ್ಯಗಳನ್ನು ವಿಭಿನ್ನವಾಗಿ ಚಿತ್ರೀಕರಿಸಿದ ಅನುಭವಗಳನ್ನು ಹಂಚಿಕೊಂಡರು ಛಾಯಾಗ್ರಾಹಕ ಶೇಖರ್ ಚಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT