ADVERTISEMENT

ಭಾವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2010, 11:35 IST
Last Updated 30 ಡಿಸೆಂಬರ್ 2010, 11:35 IST

ನಾವು ಅನ್ನ ಬೇಯಿಸುವ ನೀರು ಪರಿಶ್ರಮದ ಬೆವರು! ಹೀಗೆ, ಅಧ್ಯಾತ್ಮದ ಸೋಕಿನ ಮಾತನ್ನಾಡಿದ ‘ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ’ ಚಿತ್ರದ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಭಾವುಕರಾಗಿದ್ದರು. ಚಿತ್ರದ ಆಡಿಯೋ ಬಿಡುಗಡೆಗೆ ನಟಿ ತಾರಾ ಮತ್ತು ಹಿರಿಯ ಪತ್ರಕರ್ತ ಸಿ.ಸೀತಾರಾಮ್ ಅವರನ್ನು ಆಹ್ವಾನಿಸಿದ್ದ ಅವರು ಎಲ್ಲರನ್ನೂ ಸಮಾರಂಭಕ್ಕೆ ಉತ್ಸಾಹದಿಂದ ಬರಮಾಡಿಕೊಳ್ಳುತ್ತಿದ್ದರು. ಮೂವತ್ತಮೂರು ವರ್ಷ ದುಬೈನಲ್ಲಿ ನೆಲೆಸಿದ್ದ ರಿಚರ್ಡ್ ಒಂದೂ ಕನ್ನಡ ಚಿತ್ರ ನೋಡಿರಲಿಲ್ಲವಂತೆ. ಇದೀಗ ತಾವು ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಅವರಿಗೆ ಅಪಾರ ವಿಶ್ವಾಸ.

ನಾಯಕಿ ಸುಪ್ರೀತಾ ಅವಕಾಶ ನೀಡಿದವರಿಗೆ ವಂದಿಸಿ, ಇದು ತಮ್ಮ ‘ಅಂಬಾರಿ’ ಮತ್ತು ‘ಪೆರೋಲ್’ಗಳ ಮಿಶ್ರಣದಂಥ ಸಿನಿಮಾ ಎಂದರು.
ಮೈಸೂರಿನಲ್ಲಿ ನಡೆಯುತ್ತಿರುವ ‘ಲಿಮಿಟ್’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ತಾವು ರಿಚರ್ಡ್ ಕರೆದ ಕಾರಣ ನಿರ್ದೇಶಕ ದಿನೇಶ್ ಬಾಬು ಅವರ ಅನುಮತಿ ಪಡೆದುಕೊಂಡು ಬಂದಿದ್ದಾಗಿ ಹೇಳಿ ಸೀಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು ತಾರಾ. ಹಿನ್ನೆಲೆ ಗಾಯಕಿ ರಾಧಿಕಾ ಸೇತುಮಾಧವ, ಸಾಹಿತಿ ಕವಿರಾಜ್, ಮಳವಳ್ಳಿ ಸಾಯಿಕೃಷ್ಣ, ವಿಜಯಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.