ಹೊರಗಡೆ ಜೋರು ಮಳೆ ಸುರಿಯತ್ತಿತ್ತು. ಒಳಗಡೆ ‘ಮದುವೆ ದಿಬ್ಬಣ’ದ ತಯಾರಿ ನಡೆಯುತ್ತಿತ್ತು. ಇದೇನು ಮಳೆಗಾಲದ ಮದುವೆಯ ಬಗ್ಗೆ ಕಥೆ ಹೇಳ್ತಿದ್ದಾರೆ ಅಂದುಕೊಳ್ಳಬೇಡಿ. ಅದು ‘ಮದುವೆ ದಿಬ್ಬಣ’ ಸಿನಿಮಾ ಪತ್ರಿಕಾಗೋಷ್ಠಿ.
ಈ ವಾರ (ಏ.6) ಈ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಎಸ್. ಉಮೇಶ್ ಅವರ ಮಾತಿನಲ್ಲಿ ಬಹುದಿನದ ಶ್ರಮವನ್ನು ಪ್ರೇಕ್ಷಕನ ಮುಂದಿಡುತ್ತಿರುವ ಸಂಭ್ರಮಕ್ಕಿಂತ ತಂಡದ ಕಲಾವಿದರ ಮೇಲಿನ ಅಸಮಾಧಾನವೇ ಎದ್ದು ಕಾಣುತ್ತಿತ್ತು. ‘ಎಲ್ಲರೂ ಮೊದಲಿಗೆ ಚೆನ್ನಾಗಿಯೇ ಇರುತ್ತಾರೆ. ಆದರೆ ಎತ್ತರಕ್ಕೆ ಬೆಳೆದ ಮೇಲೆ ತಾವು ನಡೆದುಬಂದ ದಾರಿಯನ್ನು ಮರೆತುಬಿಡುತ್ತಾರೆ’ ಎಂಬಿತ್ಯಾದಿ ದೂರು ನೀಡುವುದಕ್ಕಾಗಿಯೇ ಹೆಚ್ಚಿನ ಶ್ರಮ, ಸಮಯ ವ್ಯಯಿಸಿದ ಉಮೇಶ್ ಅವರು ಚಿತ್ರದ ಬಗ್ಗೆ ಮಾತನಾಡಿದ್ದು ಕಡಿಮೆ.
ಕಿರುತೆರೆ ನಿರ್ದೆಶಕ, ನಟನಾಗಿರುವ ರವಿಕಿರಣ್ ಈ ಚಿತ್ರದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸಿದ್ದಾರೆ.
‘ಸಾಮಾನ್ಯವಾಗಿ ಎಲ್ಲರೂ ನನ್ನನ್ನು ಐಟಂ ಸಾಂಗ್ ಕುಣಿಯಲಿಕ್ಕಾಗಿ ಮಾತ್ರ ಕರೆಯುತ್ತಾರೆ. ಆದರೆ ಈ ಚಿತ್ರದಲ್ಲಿ ನಾನೊಂದು ಪಾತ್ರ ಮಾಡಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು ಅಲಿಶಾ. ನಾಯಕಿ ಸೋನಲ್ ಮಂತೆರೋ ‘ಮೊದಲ ಬಾರಿ ನಾನು ಈ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.
ಎ.ಟಿ. ರವೀಶ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಬ.ನಾ. ರವಿ ಹಣ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.