ADVERTISEMENT

ಮಾಧುರಿ ಶ್ವಾನಪ್ರೀತಿ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST
ಮಾಧುರಿ ಶ್ವಾನಪ್ರೀತಿ
ಮಾಧುರಿ ಶ್ವಾನಪ್ರೀತಿ   

`ದಿದೀ ತೇರಾ ದೇವರ್ ದೀವಾನಾ...' ಹಾಡಿನಲ್ಲಿ ಬಿಳಿ ನಾಯಿಯೊಂದಿಗೆ ಕುಣಿದ ನಟಿ ಮಾಧುರಿ ದೀಕ್ಷಿತ್ ಮಳೆಯಲ್ಲಿ ನೆನೆದು ತೊಪ್ಪೆಯಾದ ಏಳು ನಾಯಿ ಮರಿಗಳನ್ನು ಬದುಕಿಸಿದ ಘಟನೆಯೊಂದು ಮುಂಬೈನಿಂದ ವರದಿಯಾಗಿದೆ. `ಝಲಕ್ ದಿಕಲಾ ಜಾ' ರಿಯಾಲಿಟಿ ಶೋ ಚಿತ್ರೀಕರಣದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ಫಲ್ಮಿಸ್ತಾನ ಸ್ಟುಡಿಯೋದಲ್ಲಿ ಚಿತ್ರೀಕರಣಕ್ಕೆ 46 ವರ್ಷದ ಮಾಧುರಿ ತಮ್ಮ ಪತಿ ಶ್ರೀರಾಮ್ ನೆನೆ ಜತೆ ಆಗಮಿಸಿದ್ದರು. ಚಿತ್ರೀಕರಣ ಆರಂಭವಾಗಬೇಕು ಎನ್ನುವಷ್ಟರಲ್ಲಿ ಸಮೀಪದಲ್ಲಿಯೇ ನಾಯಿ ಮರಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣ ಚಿತ್ರೀಕರಣ ಸ್ಥಗಿತಗೊಳಿಸಿದ ಮಾಧುರಿ ಅವುಗಳ ಹುಡುಕಾಟಕ್ಕೆ ತೆರಳಿದರು.

ಆಗ ತಿಳಿದದ್ದು ಮುಂಬೈನ ಮಹಾ ಮಳೆಗೆ ಸಿಲುಕಿ ತೊಯ್ದು ತೊಪ್ಪೆಯಾಗಿದ್ದ ಆ ಏಳು ನಾಯಿ ಮರಿಗಳು ಜೀವನ್ಮರಣದ ಹೋರಾಟದಲ್ಲಿದ್ದವು. ತಕ್ಷಣ ಅವುಗಳ ರಕ್ಷಣೆಗೆ ಮುಂದಾದ ಮಾಧುರಿ ಶ್ರೀರಾಮ್ ದಂಪತಿ ಹಾಗೂ ಕಾರ್ಯಕ್ರಮದ ನಿರ್ದೇಶಕ ಸಾಹಿಲ್ ಛಾಬ್ರಿಯಾ ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿ ರಕ್ಷಿಸಿದ ನಾಯಿ ಮರಿಗಳಿಗೆ ಚಿಕಿತ್ಸೆ ಕೊಡಿಸಲು ಮುಂದಾದರು. ಪೇಟಾದ ಸಂಚಾರಿ ಚಿಕಿತ್ಸಾ ಘಟಕ ಬರುವವರೆಗೂ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.

`ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಚ್ಚಗಿನ ಗೂಡು ಕಳೆದುಕೊಂಡ ಹಲವಾರು ಬೆಕ್ಕು, ನಾಯಿ ಹಾಗೂ ಅವುಗಳ ಮರಿಗಳಿಗೊಂದು ಸುರಕ್ಷಿತ ಸೂರಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಾಧುರಿ, ನೆನೆ ಹಾಗೂ ಛಾಬ್ರಿಯಾ ಅವರ ಕಾಳಜಿ ಶ್ಲಾಘನೀಯ.

ತೊಂದರೆಗೆ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಮುಂದಾಗುವವರಿಗೆ ಈ ಮೂವರು ಸ್ಫೂರ್ತಿ' ಎಂದು ಪೇಟಾದ ಭಾರತ ವಿಭಾಗದ ಸಚಿನ್ ಬಂಗೇರಾ ಅವರು ಪ್ರಶಂಸಿಸಿದರು. ರಕ್ಷಿಸಿದ ನಾಯಿ ಮರಿಗಳನ್ನು ದತ್ತು ತೆಗೆದುಕೊಳ್ಳುವ ಅವಕಾಶವಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.