ADVERTISEMENT

ಯೋಗರಾಜನ ಪದ್ಯಗಳು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 19:30 IST
Last Updated 14 ಏಪ್ರಿಲ್ 2011, 19:30 IST
ಯೋಗರಾಜನ ಪದ್ಯಗಳು
ಯೋಗರಾಜನ ಪದ್ಯಗಳು   

ಭವಿಷ್ಯ ಹೇಳುವವರ ಗೆಟಪ್‌ನಲ್ಲಿ ನವೀನ್ ಕೃಷ್ಣ ಇದ್ದರು. ಮೇಜಿನ ಮೇಲೆ ಶಾಸ್ತ್ರಹೇಳುವ ಗಿಳಿಯನ್ನು ಅಡಗಿಸಿಡುವಂಥ ಪೆಟ್ಟಿಗೆ. ಆದರೆ, ಪೆಟ್ಟಿಗೆಯಲ್ಲಿ ಗಿಳಿ ಇರಲಿಲ್ಲ; ಇದ್ದದ್ದು ಹಾಡುಗಳ ಸೀಡಿ. ಆಡಿಯೋ ಬಿಡುಗಡೆ ಸಮಾರಂಭವನ್ನೂ ಡಿಫರೆಂಟ್ ಆಗಿ ಮಾಡುವ ಯೋಚನೆ ಇತ್ತೀಚೆಗೆ ಅನೇಕರಿಗೆ ಹೊಳೆಯುತ್ತಿರುವುದರಿಂದ ‘ಯೋಗರಾಜ್’ ಚಿತ್ರತಂಡದವರೂ ಅದಕ್ಕೆ ಹೊರತೇನೂ ಅಲ್ಲ.

‘ಯೋಗರಾಜ್’ ಚಿತ್ರದ ಚಿತ್ರೀಕರಣವು ಮುಗಿದಿದ್ದು, ಐಪಿಎಲ್ ಕ್ರಿಕೆಟ್‌ನ ಆರ್ಭಟದ ನಂತರ ತೆರೆಗೆ ತರುವುದು ನಿರ್ದೇಶಕ ದಯಾಳ್ ಪದ್ಮನಾಭನ್ ಉದ್ದೇಶ. ಆಡಿಯೋ ಬಿಡುಗಡೆ ಮಾಡಲು ಅಬಕಾರಿ ಸಚಿವ ರೇಣುಕಾಚಾರ್ಯ ಬಂದಿದ್ದರು. ಈ ಚಿತ್ರಕ್ಕಾಗಿ ತುಸು ಸಣ್ಣಗಾಗಿದ್ದ ನೀತು ಈಗ ಮತ್ತೆ ಹಳೆಯ ಗಾತ್ರವನ್ನೇ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರ ಹೇಳುವ ಪದ್ಯವನ್ನು ಅವರು ಅರುಹಿದರು. ನಾಯಕ ನವೀನ್ ಕೃಷ್ಣ ಕೂಡ ಕಾಲೇಜ್ ಹುಡುಗರಿಗೆ ಇಷ್ಟವಾಗುತ್ತದೆ ಎಂದು ನಂಬಲಾದ ಹಾಡನ್ನು ರಾಗವಾಗಿ ಹಾಡಿದರು.

ಚಿತ್ರಕ್ಕೆ ಎರಡು ಹಾಡುಗಳನ್ನೂ ಬರೆದಿರುವ ನವೀನ್ ಕೃಷ್ಣ ಸ್ಕ್ರಿಪ್ಟ್ ಬರೆಯುವ ಹಂತದಿಂದಲೂ ತೊಡಗಿಕೊಂಡಿದ್ದಾರೆ. ಹಾಡುಗಳಿಗೆ ಮಿಲಿಂದ್ ಧರ್ಮಸೇನ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಬಿಸಿಬಿಸಿ’ ಚಿತ್ರದ ಮೂಲಕ 2004ರಲ್ಲಿ ಹಾಡುಗಳನ್ನು ನೀಡಿದ್ದ ಅವರಿಗೆ ಇದು ಮತ್ತೊಂದು ಅವಕಾಶ. ಮುಂಬೈನ ಚಿತ್ರಸಂಗೀತದ ಗುಂಗು ಹಿಡಿದವರಂತೆ ಅವರು ಮಟ್ಟುಗಳನ್ನು ಹಾಕಿರುವ ಲಕ್ಷಣ ಹಾಡುಗಳಲ್ಲಿ ಇವೆ. ಗಜಲ್‌ಗಳ ಕುರಿತು ಅವರಿಗೆ ವಿಪರೀತ ಪ್ರೀತಿ. ಹಾರೈಸಲು ಬಂದಿದ್ದ ನಿರ್ಮಾಪಕ ಗೆಳೆಯ ಉಮೇಶ್ ಬಣಕಾರ್, ದಯಾಳ್ ಅವರನ್ನು ಎರಡನೇ ದಿನೇಶ್ ಬಾಬು ಎಂದು ಕರೆದರು. ದಯಾಳ್ ಕಡಿಮೆ ಅವಧಿಯಲ್ಲಿ ಚಿತ್ರೀಕರಣ ಮುಗಿಸಿರುವುದೇ ಇದಕ್ಕೆ ಕಾರಣ.

ಒಂದು ಹಾಡಿನ ಚಿತ್ರೀಕರಣಕ್ಕಾಗಿ ಶ್ರೀಲಂಕಾಗೆ ಹೋಗುವ ಉದ್ದೇಶ ದಯಾಳ್ ಅವರಿಗೆ ಇತ್ತಂತೆ. ಆದರೆ, 12 ನಿಮಿಷಗಳ ಈ ಹಾಡಿನ ಚಿತ್ರೀಕರಣಕ್ಕೆ ಅಗತ್ಯವಿದ್ದ ಅನುಮತಿ ಅಲ್ಲಿ ಸಿಗಲಿಲ್ಲ. ಹಾಗಾಗಿ ಮಡಿಕೇರಿ, ಚಿಕ್ಕಮಗಳೂರಿನ ಲೊಕೇಷನ್‌ಗಳಿಗೆ ಚಿತ್ರತಂಡ ಹೊರಟಿತುಇದೀಗ ‘ಯೋಗರಾಜ’ ನಗಿಸಲು ಸಂಪೂರ್ಣ ಸಜ್ಜಾಗಿದ್ದಾನೆ ಎಂಬ ಸಮಾಧಾನ ದಯಾಳ್ ಅವರದ್ದು. ಆನಂದ್ ಆಡಿಯೋ ಈ ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.