ADVERTISEMENT

ರಂಗನ ಹಂಗಾಮ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST
ರಂಗನ ಹಂಗಾಮ
ರಂಗನ ಹಂಗಾಮ   

‘ಕಳೆದ ವರ್ಷ ಮುಹೂರ್ತದ ಟೆನ್ಷನ್‌. ಈಗ ರಿಲೀಸ್‌ ಟೆನ್ಷನ್‌. ಹೀಗಾಗಿ ಮಾತಾಡಲಿಕ್ಕೆ ಆಗ್ತಾ ಇಲ್ಲ’ ಎಂದ ನಿರ್ದೇಶಕ ಪ್ರಶಾಂತ್‌ ಅವರ ಮುಖದಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವ ಹುಡುಗನ ಉದ್ವೇಗ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಈವರೆಗೆ ಥಿಯೇಟರ್‌ನಲ್ಲಿ ಕುಳಿತು ಬೇರೆಯವರ ಚಿತ್ರ ನೋಡುತ್ತಿದ್ದ ಪ್ರಶಾಂತ್‌, ತಾವೇ ನಿರ್ದೇಶಿಸಿದ ‘ರಂಗನ್‌ ಸ್ಟೈಲ್’ ಸಿನಿಮಾವನ್ನು ಇದೇ ೨೧ರಂದು ನೋಡಲಿದ್ದಾರೆ. ಅಂದು ರಾಜ್ಯದ ನೂರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

‘ನನ್ನ ಸಿನಿಮಾದಲ್ಲಿ ಸಂದೇಶವಂತೂ ಇದ್ದೇ ಇದೆ. ಅದೆಂದರೆ, ಯಾರೂ ರಂಗನ ಸ್ಟೈಲ್‌ ಅನುಕರಣೆ ಮಾಡಬೇಡಿ ಅನ್ನೋದು’ ಎಂದು ಸ್ಪಷ್ಟಪಡಿಸಿದ ಪ್ರಶಾಂತ್‌, ಮುದ್ದಾದ ಪ್ರೇಮ ಕಥೆಯ ಈ ಚಿತ್ರದ ಮೊದಲಾರ್ಧ ರಂಗನ ಸ್ಟೈಲ್‌ ಕಟ್ಟಿಕೊಟ್ಟರೆ ಉಳಿದರ್ಧ ಅವನ ಪ್ರೀತಿ ಕಥೆಯನ್ನು ಹೇಳುತ್ತದಂತೆ. ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ಸುದೀಪ್‌ ಕುರಿತು ಪ್ರಶಾಂತ್‌ ಅಭಿಮಾನದ ಹೊಳೆ ಹರಿಸಿದರು. ಸ್ನೇಹಕ್ಕೆ ಬೆಲೆ ಕೊಟ್ಟ ಸುದೀಪ್‌, ತಮ್ಮ ಪಾತ್ರ ಏನು ಎಂಬುದನ್ನು ಸಹ ಕೇಳದೇ ನೇರ ಶೂಟಿಂಗ್‌ ಸ್ಥಳಕ್ಕೆ ಬಂದು ಅಭಿನಯಿಸಿದರಂತೆ.

ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚಿರುವ ಸಂತಸದಲ್ಲಿದ್ದ ಪ್ರದೀಪ್‌, ಸಾಮಾಜಿಕ ಜಾಲತಾಣಗಳು ತಂದಿಡುವ ಸಮಸ್ಯೆಯನ್ನು ಚಿತ್ರ ತೆರೆದಿಡುತ್ತದೆ ಎಂದರು. ಹಾಡೊಂದಕ್ಕೆ ಕೇರಳದ ಸುಲ್ತಾನ್‌ ಬತೇರಿಯಲ್ಲಿ ನಡೆಸಿದ ಚಿತ್ರೀಕರಣಕ್ಕೆ ಎದುರಾದ ಅಡ್ಡಿ–ಆತಂಕಗಳನ್ನೂ ಹೇಳಿಕೊಂಡರು. ರಾಜಕಾರಣಿಯೊಬ್ಬನ ಮಗಳಾಗಿ ನಟಿಸಿರುವ ಕನ್ನಿಕಾ ತಿವಾರಿ ಅವರಿಗೆ, ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡುಗಳು ಹಿಟ್‌ ಆಗಿವೆ ಎಂಬ ಖುಷಿ.

ಚಿತ್ರದುದ್ದಕ್ಕೂ ಇರುವ ವಧು–ವರ ಜೋಡಿಸುವ ದಲ್ಲಾಳಿ ಪಾತ್ರವನ್ನು ತಬಲಾ ನಾಣಿ ನಿರ್ವಹಿಸಿದ್ದಾರೆ. ಕಚಗುಳಿ ಇಡುವ ಪಂಚಿಂಗ್‌ ಮಾತುಗಳು ಸಾಕಷ್ಟಿವೆ ಎಂದು ಸಂಭಾಷಣೆ ಬರೆದ ಮಂಜು ಮಾಂಡವ್ಯ ಹೇಳಿದರೆ, ‘ಗಂಗಮ್ಮನ್ ಸ್ಟೈಲ್ ಹಾಡು ಯುವಪೀಳಿಗೆಯ ಮನಗೆದ್ದಿದೆ’ ಎಂದು ಸಂಗೀತ ಸಂಯೋಜಿಸಿರುವ ಗುರುಕಿರಣ್‌ ಸಂತಸ ಹಂಚಿಕೊಂಡರು. ಸಿಸಿಎಲ್‌ ತಂಡವನ್ನು ಸಿನಿಮಾದ ಪ್ರಚಾರಕ್ಕೆ ಆಹ್ವಾನಿಸುವ ಕುರಿತು ಯೋಚನೆ ನಡೆಯುತ್ತಿದೆ ಎಂದು ಪ್ರದೀಪ್‌ ಹೇಳಿದರಾದರೂ, ಅದಿನ್ನೂ ನಿರ್ಧಾರವಾಗಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.