ಬೆಂಗಳೂರಿನ ಶರಣ್ಸ್ ಮ್ಯೂಸಿಕ್ ಅಕಾಡೆಮಿಯವರು ಹೊಸದೊಂದು ವಿಡಿಯೊ ಆಲ್ಬಮ್ ಹೊರತಂದಿದ್ದಾರೆ. ಇದನ್ನು ಅವರು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಪಡಿಸಿರುವುದು ವಿಶೇಷ. ಕನ್ನಡದಲ್ಲಿ ‘ಮನಸೇ ನಿನ್ನಾ ದಾರಿಯು ಎಲ್ಲಿದೆ’ ಎನ್ನುವ ಶೀರ್ಷಿಕೆಯಡಿ, ಹಿಂದಿಯಲ್ಲಿ ‘ಏ ಮನ್ ಕಹಾನ್ ಚಲಾ’ ಶೀರ್ಷಿಕೆಯ ಅಡಿ ಇದು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಈ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಬಂದಿದ್ದರು. ಈ ಆಲ್ಬಮ್ಗೆ ಸಂಗೀತ ನೀಡಿದವರು, ನಿರ್ದೇಶನ ಮಾಡಿದವರು ಹಿಂದೂಸ್ತಾನಿ ಗಾಯಕ ಶರಣ್ ಚೌಧರಿ. ಅನುರಾಧಾ ಭಟ್ ಮತ್ತು ಕೆ. ರುಮಿತ್ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಆಲ್ಬಮ್ನಲ್ಲಿ ರುಮಿತ್ ಅವರು ನಟಿಸಿದ್ದಾರೆ. ಅವರ ಜೊತೆ ಧನುಶ್ರೀ ಅವರೂ ಹೆಜ್ಜೆ ಹಾಕಿದ್ದಾರೆ.
ಹಾಡುಗಳ ಚಿತ್ರೀಕರಣವು ಬಳ್ಳಾರಿಯ ಜಿಂದಾಲ್ ಸಂಸ್ಥೆಯ ಆವರಣದಲ್ಲಿ ನಡೆದಿದೆ. ‘ಹಣ ಸಂಪಾದಿಸುವುದು ಮಾತ್ರವೇ ನಮ್ಮ ಉದ್ದೇಶ ಅಲ್ಲ. ಈ ಆಲ್ಬಮ್ ಸಿದ್ಧಪಡಿಸಿದ್ದು ನಮ್ಮ ಪಾಲಿಗೆ ಒಂದು ಉತ್ತಮ ಅನುಭವ. ಹಾಡಿನ ದೃಶ್ಯಗಳು ಸಿನಿಮಾ ದೃಶ್ಯಗಳಿಗೆ ಸರಿಸಮನಾದ ಗುಣಮಟ್ಟ ಹೊಂದಿವೆ’ ಎಂದು ಅಕಾಡೆಮಿ ಹೇಳಿದೆ. ಈ ಹಾಡುಗಳ ತಮಿಳು ಹಾಗೂ ತೆಲುಗು ಆವೃತ್ತಿಯನ್ನು ಹೊರತರುವ ಉದ್ದೇಶ ಕೂಡ ಅಕಾಡೆಮಿಗೆ ಇದೆಯಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.