ಅದು ‘ಹಳ್ಳಿ ಪಂಚಾಯಿತಿ’ ಚಿತ್ರದ ಸುದ್ದಿಗೋಷ್ಠಿ. ಚಿತ್ರದ ಪ್ರಚಾರಕ್ಕಾಗಿ ಅಮೆರಿಕದಿಂದ ಹಿರಿಯ ನಟಿ ಗೀತಾ ಬಂದಿದ್ದರು. ಅವರು ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
‘1996ರಲ್ಲಿ ನನ್ನ ವಿವಾಹ ನಡೆಯಿತು. ಆ ಬಳಿಕ ಕೆಲವು ಚಿತ್ರಗಳಲ್ಲಿ ನಟಿಸಿದೆ. ನಾಯಕನ ಅಮ್ಮನಾಗಿ ಗದ್ದೆ ಕೆಲಸ ಮಾಡುವ ಪಾತ್ರದಲ್ಲಿ ಇಲ್ಲಿಯವರೆವಿಗೂ ನಟಿಸಿಲ್ಲ’ ಎಂದರು ಗೀತಾ.
ಸೆಂಚುರಿಗೌಡರಿಗೆ ಕಿವಿ ಕೇಳಿಸುತ್ತಿರಲಿಲ್ಲ. ಆದರೂ, ನಿರ್ದೇಶಕರು ಹೇಳಿಕೊಟ್ಟಂತೆ ನಟಿಸುತ್ತಿದ್ದರು. ಅವರನ್ನು ನೋಡಿದಾಗ ನಟ ಬಾಲಕೃಷ್ಣ ನೆನಪಿಗೆ ಬರುತ್ತಿದ್ದರು. ಈಗ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಿದೆ ಎಂದ ಅವರ ಮಾತಿನಲ್ಲಿ ವೃತ್ತಿ ಬದ್ಧತೆ ಕಾಣುತ್ತಿತ್ತು.
ಕತೆ ಬರೆದು ನಿರ್ಮಾಣ ಮಾಡಿರುವ ಪ್ರೇಮಾ ಯುವರಾಜ್, ‘ಚಿತ್ರದಲ್ಲಿ ಶಿಕ್ಷಕಿಯಾಗಿ ನಟಿಸಿದ್ದೇನೆ. ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಹೇಳಲಾಗಿದೆ. ಗ್ರಾಮೀಣ ಸೊಗಡಿನ ಭಾಷೆ ಪ್ರೇಕ್ಷಕರಿಗೆ ರಂಜಿಸಲಿದೆ’ ಎಂದರು.
‘ಗಡ್ಡಪ್ಪ, ಸಂಚುರಿಗೌಡ ಇದ್ದಾರೆ ಅಂತ ಎಲ್ಲಿಯೂ ಡಬ್ಬಲ್ ಮೀನಿಂಗ್ ಡೈಲಾಗ್ಗಳನ್ನು ತುರುಕಿಲ್ಲ. ಮಹಿಳೆ ಕೂಡ ಗದ್ದೆ ಕೆಲಸ ಮಾಡಬಲ್ಲಳು ಎಂಬುದನ್ನು ತೋರಿಸಿದ್ದೇವೆ. ಪ್ರೊ.ದೊಡ್ಡರಂಗೇಗೌಡ ಅವರು ಎರಡು ಹಾಡು ರಚಿಸಿದ್ದಾರೆ. ಹರಿಕಾವ್ಯ ಅವರ ಸಂಗೀತವಿದೆ’ ಎಂದರು.
ಹಳ್ಳಿಯಲ್ಲಿ ನಡೆಯುವ ಘಟನಾವಳಿಗಳೇ ಚಿತ್ರದ ಕಥಾಹಂದರ. ಮಂಡ್ಯ ಜಿಲ್ಲೆಯ ಕಾಡುಕೊತ್ತನಹಳ್ಳಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಜಿ. ಉಮೇಶ್ ಈ ಚಿತ್ರ ನಿರ್ದೇಶಿಸಿದ್ದಾರೆ. ‘ತಿಥಿ’ ಖ್ಯಾತಿಯ ನಟ ಅಭಿಷೇಕ್ ನಟಿಸಿದ್ದಾರೆ.
ನಟ ಅಭಿಷೇಕ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.