ADVERTISEMENT

ಆಟೊ ಭಾಸ್ಕರ 11 ಅವತಾರ

ಶಶಿಕುಮಾರ್ ಸಿ.
Published 6 ಜುಲೈ 2018, 20:30 IST
Last Updated 6 ಜುಲೈ 2018, 20:30 IST
   

* ಒಂದು ಸಿನಿಮಾ ಹನ್ನೊಂದು ಪಾತ್ರ ಏನಿದು?
ಆಟೊ ಭಾಸ್ಕರ ಸಿನಿಮಾದಲ್ಲಿಒಟ್ಟು 11 ಪಾತ್ರಗಳಿವೆ. ಪಾತ್ರ ಒಂದಕ್ಕೊಂದು ಭಿನ್ನ. ಆಟೊ ಭಾಸ್ಕರ ಎಂಬ ವ್ಯಕ್ತಿಯ ಸುತ್ತ ಹೆಣೆದ ಕಥೆ. ಆಟೊ ಚಾಲಕ ಭಾಸ್ಕರ, ಭಾಸ್ಕರನ ಅಪ್ಪ, ಮುನ್ನಿ (ಆಟೊ ಭಾಸ್ಕರನ ಗೆಳತಿ), ಅಂಧ ಕಲಾವಿದ (ರಾಜ್ ಕುಮಾರ್ ಅಭಿಮಾನಿ), ಹಿರಿಯ ನಾಗರಿಕ, ಲವರ್ ಬಾಯ್ ಹಾಗೂ 55 ವರ್ಷದ ಮಹಿಳೆ ಪಾತ್ರಧಾರಿಯಾಗಿ ನಟಿಸಿದ್ದೇನೆ. ಉಳಿದ ಪಾತ್ರಗಳನ್ನು ಸಿನಿಮಾದಲ್ಲಿ ನೋಡಿದರೆ ಚೆಂದ.

* 11 ಪಾತ್ರಗಳಲ್ಲಿ ನಟಿಸುವ ಆಲೋಚನೆ ಹೇಗೆ ಬಂತು?
ಸಿನಿಮಾ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಬೇಕು ಎಂಬ ಕನಸನ್ನು ಕಟ್ಟಿಕೊಂಡೆ ನಾನು 2012ರಲ್ಲಿ ಬೆಂಗಳೂರಿಗೆ ಬಂದೆ. ನಟನೆಯ ಕಸಬನ್ನು ಕಲಿಯಲುಸಾಕಷ್ಟು ತಯಾರಿ ನಡೆಸಿದ್ದೇನೆ. ರಂಗಭೂಮಿಯಲ್ಲಿ ಅಭಿನಯದ ವ್ಯಾಕರಣವನ್ನು ತಿಳಿಯಲು ಶ್ರಮಿಸಿದ್ದೇನೆ. ಹಲವು ನಾಟಕಗಳಲ್ಲಿ ನಟಿಸಿದ್ದೇನೆ. ನನ್ನಲ್ಲಿನ ಪ್ರತಿಭೆ ಗುರುತಿಸಿ, ಅವಕಾಶ ಸಿಗಬೇಕು ಎಂದು ಈ ಸಾಹಸಕ್ಕೆ ಕೈ ಹಾಕಿದೆ.

* ವಿನೂತನ ಪ್ರಯತ್ನಕ್ಕೆ ಸಿಕ್ಕ ಪ್ರತಿಕ್ರಿಯೆ?
ಯಾರನ್ನೋ ಮೀರಿಸುವ ಉದ್ದೇಶವಿಲ್ಲ. ನನ್ನ ಪ್ರತಿಭೆಯ ಅನಾವರಣಕ್ಕೆ ಸ್ನೇಹಿತರು, ಗುರುಗಳ ಮಾರ್ಗದರ್ಶನದಂತೆ ಈ ನಿರ್ಧಾರ ಕೈಗೊಂಡೆ. ಅದಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರಿಂದ ಟೀಕೆಗಳು ಎದುರಾಗಿವೆ. ಅವೆಲ್ಲದಕ್ಕೂ ಸಿನಿಮಾ ಉತ್ತರಿಸಲಿದೆ.

ADVERTISEMENT

ಏಳು ಪಾತ್ರಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರೀಕ್ಷೆಯೂ ಹುಟ್ಟಿಸಿವೆ. ಜುಲೈ ಕಡೆ ವಾರ ಸಿನಿಮಾ ನೋಡಬಹುದು.

* ನಿರ್ದೇಶಕ+ನಟನೆಯ ನಿರ್ವಹಣೆ ಹೇಗೆ?
ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ಮೂರು ತಿಂಗಳು ರಿಹರ್ಸಲ್‌ ಮಾಡಿದ್ದೆ. ನಿತ್ಯ 14 ರಿಂದ 15 ಗಂಟೆ ಪ್ರತಿ ಪಾತ್ರ ರಿಹರ್ಸಲ್ ಮಾಡುತ್ತಿದ್ದೆ. ನಿರ್ದೇಶಕನ ಜವಾಬ್ದಾರಿಯೂ ನನ್ನ ಮೇಲಿದ್ದರಿಂದ ಕೆಲವೊಮ್ಮೆ ಒತ್ತಡ ಎದುರಾಗಿತ್ತು. 10 ಪಾತ್ರಗಳನ್ನು ಒಂದೇ ದಿನದಲ್ಲಿ ನಟಿಸಬೇಕಾದ ಅನಿವಾರ್ಯತೆ ಒಮ್ಮೆ ಸೃಷ್ಟಿಯಾಗಿತ್ತು. ಆಗ ಕೊಂಚ ಕಷ್ಟವಾಯಿತು.ಆದರೆ, ಕಠಿಣ ಪರಿಶ್ರಮ ಪಟ್ಟಿದ್ದರಿಂದ ಚಿತ್ರೀಕರಣ ಸರಾಗವಾಗಿ ನಡೆಯಿತು.

ನಿಮ್ಮ ಸಿನಿಮಾಗಳ ಬಗ್ಗೆ ಒಂದಿಷ್ಟು?
‘6ನೇ ಮೈಲಿ’ ಹಾಗೂ ‘ಆದಿ ಪುರಾಣ’ ನನ್ನ ಮೊದಲೆರಡು ಸಿನಿಮಾಗಳು. ಈ ಸಿನಿಮಾಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕ ನಟನಾಗಿ ಅಭಿನಯಿಸಿದ ಹಾಗೂ ಸಿನಿಮಾದ ಎಲ್ಲ ಪಾತ್ರಗಳಲ್ಲಿಯೂ ನಾನೇ ಆವರಿಸಿಕೊಂಡಿರುವ ಸಿನಿಮಾ ‘ಆಟೊಭಾಸ್ಕರ’. ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೋಡಕ್ಷನ್ ಹಂತದಲ್ಲಿದೆ

* ಕಲೆಯ ನಂಟು ಬೆಳೆದದ್ದು ಹೇಗೆ?
ಚಿಕ್ಕವನಿದ್ದಾಗ ತಂದೆ–ತಾಯಿ ನನ್ನನ್ನು ಸಂಗೀತ ಕಲಿಯಲು ಸೇರಿಸಿದ್ದರು. ಅರಿವಿಲ್ಲದೆ ಸಂಗೀತಕ್ಕಿಂತ ನಟನೆಯೇ ನನ್ನ ಮೈಗಂಟಿಕೊಂಡಿತು. ಮುಂಗಾರುಮಳೆ ಮತ್ತು ದುನಿಯಾ ಸಿನಿಮಾ ನೋಡಿ ಆಸಕ್ತಿ ಮೂಡಿತ್ತು. ಸಿನಿಮಾದ ಗುಂಗಿನಲ್ಲಿದ್ದ ನಾನು ಓದಿನ ನೆಪದಲ್ಲಿ ಬೆಂಗಳೂರಿಗೆ ಬಂದೆ. ಹಾಗೆಂದು ವಿದ್ಯಾಭ್ಯಾಸ ನಿಲ್ಲಿಸದೆ ಹವ್ಯಾಸವಾಗಿ ಎಂ.ಕಾಂ ಮುಗಿಸಿರುವೆ. ವೃತ್ತಿಯಾಗಿ ನಟನೆಯನ್ನ ತೆಗೆದುಕೊಂಡಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.