ಸಿನಿಮಾ ಜೊತೆಗೆ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ಜಗ್ಗೇಶ್ ಅಭಿನಯದ ಹೊಸ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾದ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲಿದೆ.
‘ರಾಘವೇಂದ್ರ ಸ್ಟೋರ್ಸ್’ ಹಾಗೂ ‘ತೋತಾಪುರಿ’ ಸರಣಿ ಸಿನಿಮಾಗಳ ಬಳಿಕ ಪ್ರೇಕ್ಷಕರನ್ನು ಮತ್ತೊಮ್ಮೆ ನಗಿಸಲು ಬರುತ್ತಿದ್ದಾರೆ ನವರಸನಾಯಕ. ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಮಗದೊಮ್ಮೆ ಜಗ್ಗೇಶ್ಗೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ‘ರಂಗನಾಯಕ’ ಮಾರ್ಚ್ 8ರಂದು ಬಿಡುಗಡೆಯಾಗಲಿದೆ. 2006ರಲ್ಲಿ ‘ಮಠ’ ಸಿನಿಮಾ ಹಾಗೂ 2009ರಲ್ಲಿ ‘ಎದ್ದೇಳು ಮಂಜುನಾಥ’ ಬಿಡುಗಡೆಯಾಗಿತ್ತು. ಇದಾಗಿ 15 ವರ್ಷಗಳ ಬಳಿಕ ಗುರುಪ್ರಸಾದ್–ಜಗ್ಗೇಶ್ ಜೋಡಿ ಒಂದಾಗಿ ಬರುತ್ತಿದೆ. ಸಿನಿಮಾ ಸೆಟ್ಟೇರಿ ಹಲವು ವರ್ಷಗಳೇ ಕಳೆದಿದ್ದು, ನಾನಾ ಕಾರಣಗಳಿಂದ ಚಿತ್ರೀಕರಣ, ಸಿನಿಮಾ ಬಿಡುಗಡೆ ವಿಳಂಬವಾಗಿತ್ತು.
‘ನನ್ನ ಮತ್ತು ಗುರುಪ್ರಸಾದ್ ಜುಗಲ್ಬಂದಿಯಲ್ಲಿ ಎರಡು ಸಿನಿಮಾ ನೋಡಿ ಆನಂದಿಸಿ ಮತ್ತೆ ನಮ್ಮಿಬ್ಬರ ಚಿತ್ರ ನೋಡಬೇಕೆಂದು ಆಶಿಸಿದ್ದೀರಿ. 15 ವರ್ಷಗಳ ಬಳಿಕ ಯಾವುದೇ ಮ್ಯಾಜಿಕ್ ಇಲ್ಲದ, ಯಾವುದೇ ಲಾಜಿಕ್ ಇಲ್ಲದ ಕೇವಲ ನಗೆಯ ಗಲಭೆ ಎಬ್ಬಿಸಲಿದ್ದೇವೆ. ನಿಮ್ಮನ್ನು ನಗೆಗಡಲಲ್ಲಿ ತೇಲಿಸಬೇಕೆಂದು ಇಬ್ಬರು ಹಟತೊಟ್ಟು ಚಿತ್ರಿಸಿದ್ದೇವೆ’ ಎಂದು ‘ರಂಗನಾಯಕನ’ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದಾರೆ ಜಗ್ಗೇಶ್. ಎ.ಆರ್. ವಿಖ್ಯಾತ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.