ಬೆಂಗಳೂರು: ‘ಪುನೀತ್ ಅಗಲಿಕೆಯ ನೋವನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸಿ, ಕುಟುಂಬದವರ ಭಾರವನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ‘ಅಪ್ಪು’ ಜೀವಂತವಾಗಿದ್ದಾನೆ ಎನ್ನುವ ಭಾವನೆ ಮೂಡಿದೆ’ಎಂದು ನಟ ಶಿವ ರಾಜ್ಕುಮಾರ್ ಹೇಳಿದರು.
ಅಮೆರಿಕ ಕನ್ನಡ ಕೂಟಗಳ ಆಗರ ಸಂಸ್ಥೆ(ಅಕ್ಕ) ಆನ್ಲೈನ್ ಮೂಲಕ ಆಯೋಜಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪುನೀತ್ ಎಲ್ಲರ ಜತೆ ಹೃದಯವಂತಿಕೆ ಮೆರೆದಿದ್ದ. ಅಪ್ಪುವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ‘ಹೃದಯ’ ಎಂದು ಕರೆಯುತ್ತೇನೆ. ಅದೇ ರೀತಿ ಇಂದು ಅಪ್ಪು ಎಲ್ಲರ ಹೃದಯಗಳನ್ನು ಗೆದ್ದಿದ್ದಾನೆ’ ಎಂದು ಹೇಳಿದರು.
ನಟ ರಾಘವೇಂದ್ರ ರಾಜ್ಕುಮಾರ್, ‘ಪುನೀತ್ ಆಡುವ ವಯಸ್ಸಿನಲ್ಲಿ ಸಾಧನೆ ಮಾಡಿದ, ದುಡಿಯುವ ವಯಸ್ಸಿನಲ್ಲಿ ದಾನ ಮಾಡಿದ. ಅಪ್ಪು ಜೀವನದಲ್ಲಿ ಎಲ್ಲವೂ ಬೇಗನೆ ನಡೆಯಿತು.ಹತ್ತಾರು ವರ್ಷ ಹಂದಿಯಂತೆ ಬದುಕುವುದಕ್ಕಿಂತ, ಎರಡು ವರ್ಷ ನಂದಿಯಂತೆ ಬದುಕಬೇಕು ಎನ್ನುವಂತೆ ಎಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ. ಪುನೀತ್ಗೆಅಣ್ಣನಾಗಿರುವುದೇ ನನಗೆ ಸಿಕ್ಕಿರುವ ಗೌರವ’ ಎಂದರು.
‘ಅಕ್ಕ’ ಸಂಸ್ಥೆಯ ಅಧ್ಯಕ್ಷ ಅಮರ್ನಾಥ ಗೌಡ ಅವರು ಪುನೀತ್ ರಾಜ್ಕುಮಾರ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದರು. ಸಂಸ್ಥೆಯಉಪಾಧ್ಯಕ್ಷೆ ಅನುರಾಧ ಹಾಗೂ ಪದಾಧಿಕಾರಿಗಳು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.