ಹೇಮಂತ್ ಎಂ.ರಾವ್ ನಿರ್ಮಾಣದ, ಜನಾರ್ದನ್ ಚಿಕ್ಕಣ್ಣ ನಿರ್ದೇಶನದ ‘ಅಜ್ಞಾತವಾಸಿ’ ಸಿನಿಮಾ ಏ.11ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದೀಗ ಈ ಸಿನಿಮಾ ಒಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ.
ನಟ ರಂಗಾಯಣ ರಘು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಮೇ 28ರಿಂದ ಜೀ5 ಒಟಿಟಿ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಮಲೆನಾಡ ಸಣ್ಣ ಹಳ್ಳಿಯ ಜಮೀನ್ದಾರ ಶಂಕರಪ್ಪನ ನಿಧನದಿಂದ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಅದೊಂದು ಸಹಜ ಸಾವು ಅಂದುಕೊಂಡವರಿಗೆ ಅದು ಸಹಜ ಸಾವಲ್ಲ, ಕೊಲೆ ಎಂದು ಅದೇ ಠಾಣೆಯಲ್ಲಿ ಎಷ್ಟೋ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಹೇಳುತ್ತಾರೆ. ಯಾರು ಈ ಕೊಲೆ ಮಾಡಿದವರು, ಅದರ ಹಿಂದಿನ ಕಥೆಯೇ ‘ಅಜ್ಞಾತವಾಸಿ’. ಚಿತ್ರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರವನ್ನು ರಂಗಾಯಣ ರಘು ನಿರ್ವಹಿಸಿದ್ದಾರೆ. ಶರತ್ ಲೋಹಿತಾಶ್ವ, ಸಿದ್ದು ಮೂಲಿಮನಿ, ಪಾವನಾ ಗೌಡ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.