ಮೈಸೂರು: ‘ಕನ್ನಡ ಸಿನಿಮಾ ರಂಗದಲ್ಲಿ ಎಲ್ಲರೂ ಲೀಡರ್. ಈ ಕ್ಷೇತ್ರದಲ್ಲಿ ನನಗಿಂತ ಹಿರಿಯರಾದ ಅನಂತನಾಗ್, ರವಿಚಂದ್ರನ್ ಇದ್ದಾರೆ. ಸಿನಿಮಾ ನಗರಿ ನಿರ್ಮಾಣ ಸೇರಿದಂತೆ ಉತ್ತಮ ಕೆಲಸಕ್ಕೆ ನನ್ನ ಬೆಂಬಲವಿದೆ. ನಾನೂ ಕೈ ಜೋಡಿಸುತ್ತೇನೆ’ ಎಂದು ನಟ ಶಿವರಾಜ್ಕುಮಾರ್ ಮಂಗಳವಾರ ಇಲ್ಲಿಗೆ ಸಮೀಪದ ನಗುವನಹಳ್ಳಿಯಲ್ಲಿ ಹೇಳಿದರು.
‘ಸಿನಿಮಾ ನಗರಿ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಉತ್ತಮ ಸ್ಥಳದಲ್ಲಿ, ಸರಿಯಾದ ವಿಧಾನದಲ್ಲಿ ಆಗಬೇಕು. ಅವಸರಪಡಬಾರದು. ಇದು ವಿಶ್ವದಲ್ಲೇ ಅತ್ಯುತ್ತಮ ಸಿನಿಮಾ ನಗರಿ ಎನಿಸಿಕೊಳ್ಳಬೇಕು. ಅದಕ್ಕೆ ನಾವು ಕೂಡ ಸಲಹೆ ನೀಡುತ್ತೇವೆ. ಸಿನಿಮಾ ರಂಗಕ್ಕೆ ಹಾಗೂ ಜನರಿಗೆ ಉಪಯೋಗವಾಗುವಂತಿರಬೇಕು’ ಎಂದರು.
ರಾಗಿ ತಿನ್ನುತ್ತೇವೆ: ‘ಭಾರತದ ಜನರಿಗೆ ರೋಗನಿರೋಧಕ ಶಕ್ತಿ ಹೆಚ್ಚು. ಇನ್ನು ಕರ್ನಾಟಕದಲ್ಲಿ ನಾವು ಹೆಚ್ಚು ರಾಗಿ ತಿನ್ನುತ್ತೇವೆ. ಆದರೂ ಕೋವಿಡ್–19 ಸೋಂಕಿನ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಸಲಹೆ ನೀಡಿದರು.
‘ಸಿನಿಮಾ ಶೂಟಿಂಗ್ ಮುಂದುವರಿದಿದೆ. ಭಾನುವಾರ ಶಬರಿಮಲೆಗೆ ಹೋಗುತ್ತಿದ್ದೇನೆ. ನನಗೆ ಯಾವುದೇ ಆತಂಕವಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.