ಟಾಲಿವುಡ್ ಚಲನಚಿತ್ರ ಅಭಿಮಾನಿಗಳಲ್ಲಿ ಮತ್ತೊಮ್ಮೆ ಇಬ್ಬರು ಘಟಾನುಘಟಿಗಳ ಸಂಯೋಜನೆಯ ಸಿನಿಮಾ ವೀಕ್ಷಿಸುವ ಕಾತರ ಶುರುವಾಗಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಹಾಗೂ ಆ್ಯಕ್ಷನ್ ಕಾಮಿಡಿ ಚಿತ್ರಗಳ ನಿರ್ದೇಶಕರೆಂದೇ ಹೆಸರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್ ಸಂಯೋಜನೆಯ ಹೊಸ ಚಿತ್ರ ಪ್ರಕಟವಾಗಿರುವುದು ಇದಕ್ಕೆ ಕಾರಣ.
‘ಜುಲಾಯಿ’ ಮತ್ತು ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾಗಳ ಮೂಲಕ ಭರ್ಜರಿ ಮನರಂಜನೆ ನೀಡಿದ್ದ ಅಲ್ಲು–ತ್ರಿವಿಕ್ರಮ್ ಜೋಡಿ ಮುಂದಿನ ನವರಾತ್ರಿ ಹೊತ್ತಿಗೆ ತೆರೆಯಲ್ಲಿ ಮತ್ತೆ ರಂಜಿಸಲಿದ್ದಾರೆ. ಹೊಸ ವರ್ಷಕ್ಕೆ ಕ್ಷಣಗಣನೆ ಮಾಡುತ್ತಿರುವ ಹೊತ್ತಿನಲ್ಲಿ ಅಲ್ಲು ಅರ್ಜುನ್ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದರು.
ಹಾರಿಕಾ ಆ್ಯಂಡ್ ಹಸೀನ್ ಕ್ರಿಯೇಷನ್ಸ್, ಗೀತಾ ಆರ್ಟ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂದು ಹಾರಿಕಾ ತಂಡ ಟ್ವೀಟ್ ಮಾಡಿದೆ. ಚಿತ್ರದ ಆರಂಭಿಕ ಪ್ರಕ್ರಿಯೆಗಳು ಈಗಾಗಲೇ ಮುಗಿದಿವೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣವೂ ಆರಂಭಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವರ್ಷ ನವರಾತ್ರಿ ವೇಳೆ ಚಿತ್ರ ತೆರೆಕಾಣಲಿದೆ’ ಎಂಬುದು ನಿರ್ಮಾಪಕರು ನೀಡುವ ಮಾಹಿತಿ.
ಕಳೆದ ವರ್ಷ ತೆರೆಕಂಡ ‘ನಾ ಪೇರು ಸೂರ್ಯ’ ನಂತರ ಅಲ್ಲು ಅರ್ಜುನ್ ನಟಿಸುತ್ತಿರುವ ಚಿತ್ರ ಇದಾಗಿದೆ.
ಭಾರಿ ಯಶಸ್ಸು ಗಳಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರೂ ಚಿತ್ರ ಹಿಟ್ ಆಗಲಿಲ್ಲ. ಇತ್ತ ತ್ರಿವಿಕ್ರಮ್ ಶ್ರೀನಿವಾಸ್ ಎರಡು ಚಿತ್ರಗಳ ಮೂಲಕ ಸುದ್ದಿಯಾದರು. ಪವನ್ ಕಲ್ಯಾಣ್ ನಟನೆಯ ‘ಅಜ್ಞಾತವಾಸಿ’, 2018ರಲ್ಲಿ ನೆಲಕಚ್ಚಿದ ಚಿತ್ರಗಳ ಪಟ್ಟಿ ಸೇರಿದರೆ, ಜೂನಿಯರ್ ಎನ್ಟಿಆರ್ ನಾಯಕತ್ವದ ‘ಅರವಿಂದ ಸಮೇತ ವೀರ ರಾಘವ’ ಚಿತ್ರ ಉತ್ತಮ ನಿರ್ವಹಣೆ ತೋರಿ ತ್ರಿವಿಕ್ರಮ್ ಅವರಿಗೆ ಹೊಸ ಚೈತನ್ಯ ನೀಡಿತ್ತು.
ಅಲ್ಲು ಅರ್ಜುನ್ ಈ ಚಿತ್ರದ ಮೂಲಕ ಮತ್ತೆ ಟಾಲಿವುಡ್ನಲ್ಲಿ ಮಿಂಚುತ್ತಾರೆ ಎಂಬ ವಿಶ್ವಾಸ ಅವರಂತೆಯೇ ಅಭಿಮಾನಿಗಳಿಗೂ ಇದೆ. ಅದೃಷ್ಟದಾಟ ಹೇಗಿರುತ್ತದೋ ಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.