ADVERTISEMENT

‘ಅಂಬಾನಿ ಪುತ್ರ’ ಬಿಡುಗಡೆ ನಾಳೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 7:46 IST
Last Updated 25 ಫೆಬ್ರುವರಿ 2021, 7:46 IST

ಮಂಡ್ಯ: ‘ಅಪ್ಪಟ ಗ್ರಾಮೀಣ ಪ್ರತಿಭೆ ಸುಪ್ರೀಂ ನಾಯಕನ ನಟರಾಗಿ ಅಭಿನಯಿಸಿರುವ ‘ಅಂಬಾನಿ ಪುತ್ರ’ ಚಲನಚಿತ್ರ ಫೆ. 26ರಂದು ರಾಜ್ಯದ 40ಕ್ಕೂ ಹೆಚ್ಚು ಚಲನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದ್ದು, ಚಿತ್ರಮಂದಿರದಲ್ಲೇ ವೀಕ್ಷಿಸಿ ಪ್ರೋತ್ಸಾಹಿಸಬೇಕು’ ಎಂದು ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಗನ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಂದೆ ಕೆ.ಎನ್‌.ವೆಂಕಟೇಶ್‌, ಅವರ ಸ್ನೇಹಿತ ವರುಣ್‌ಗೌಡ ಅವರೇ ಅಂಬಾನಿ‍ಪುತ್ರ ಚಿತ್ರ ನಿರ್ಮಾಣ ಮಾಡಿದ್ದು, ಹಳ್ಳಿ ಸೊಗಡಿನ ಪ್ರೀತಿ ಪ್ರಧಾನವಾದ ಕಥೆಯನ್ನೊಳಗೊಂಡಿದೆ’ ಎಂದು ಹೇಳಿದರು.

ಅಭಿಷೇಕ್‌ ಜಿ. ರಾಯ್‌ ಸಂಗೀತ ನೀಡಿದ್ದು ‘ದೊರೆರಾಜ್‌ ತೇಜಾ ಅವರು ಕಥೆ, ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಮಾಂಜನೇಯ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಿನಿಮಾದಲ್ಲಿ ಆಶಾ
ಭಂಡಾರಿ, ಕಾವ್ಯಾ ನಾಯಕ ನಟಿಯರಾಗಿ ಅಭಿನಯಿಸಿದ್ದಾರೆ’ ಎಂದರು.

ADVERTISEMENT

ನಟ ಸುಪ್ರೀಂ ಮಾತನಾಡಿ ‘ಯುವ ಜನರು ಖಾಲಿ ತಲೆಯಲ್ಲಿದ್ದಾಗ ಏನೂ ನಿಯಂತ್ರಣದಲ್ಲಿರುವುದಿಲ್ಲ. ಮನೆಯವರು ಮಕ್ಕಳ ಮೇಲೆ ಯಾವುದೇ ತಪ್ಪು ಮಾಡುವುದಿಲ್ಲ ಎಂಬ ನಂಬಿಕೆ ಇಟ್ಟಿರುತ್ತಾರೆ. ಆದರೆ ಜೀವನದಲ್ಲಿ ಅದನ್ನೂ ಮೀರಿ ಮತ್ತೆನೋ ಘಟಿಸುತ್ತದೆ. ಅದನ್ನು ನಿಭಾಯಿಸುವ ಕಥಾ ಹಂದರವನ್ನು ಚಲನಚಿತ್ರ ಒಳಗೊಂಡಿದೆ. ಕುಟುಂಬದವರೆಲ್ಲರೂ ಕುಳಿತು ವೀಕ್ಷಿಸುವ ಚಿತ್ರ ಇದಾಗಿದ್ದು, ಎಲ್ಲರೂ ವೀಕ್ಷಿಸಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ಹಾಸ್ಯ ನಟ ಮಿಮಿಕ್ರಿ ಗೋಪಿ, ನಿರ್ಮಾಪಕರಾದ ಕೆ.ಎನ್‌.ವೆಂಕಟೇಶ್‌, ವರುಣ್‌ಗೌಡ, ಸಹ ನಿರ್ಮಾಪಕ ಮಂಹೇಶ್‌ಗೌಡ, ಅಭಿಷೇಕ್‌, ಚಂದ್ರು, ಬಿ.ಎಲ್‌.ಬೋರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.