ADVERTISEMENT

ಮರ್ಡರ್‌ ಚಿತ್ರಕ್ಕೆ ತಡೆ; ಆರ್‌ಜಿವಿ ವಿರುದ್ಧ ಅರ್ಜಿ ಸಲ್ಲಿಸಿದ ಅಮೃತಾ ಪ್ರಣಯ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 9:20 IST
Last Updated 5 ಆಗಸ್ಟ್ 2020, 9:20 IST
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ   

ವಿವಾದಾತ್ಮಕ ಚಿತ್ರಗಳನ್ನು ಮಾಡುವುದು ಹಾಗೂ ಸದಾ ಕಾನೂನು ವಿವಾದಗಳನ್ನು ಎದುರಿಸುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಈಗ ಮತ್ತೆ ಕಾನೂನು ಸಮರದಲ್ಲಿ ಸಿಲುಕಿದ್ದಾರೆ.

ಎರಡು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಮೇಲೆ ’ಮರ್ಡರ್‌’ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು ಆರ್‌ಜಿವಿ. ಈಗ ಆ ವಿಷಯವಾಗಿ ಆರ್‌ಜಿವಿ ವಿರುದ್ಧ ನಲಗೊಂಡ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಘಟನೆಯ ರೂವಾರಿ ಅಮೃತಾ ಪ್ರಣಯ್‌.

ಅಮೃತಾ ಎಂಬ ಮೇಲ್ಜಾತಿಯ ಹುಡುಗಿ ದಲಿತ ಸಮುದಾಯದ ಪ್ರಣಯ್ ಎಂಬ ಹುಡುಗನನ್ನು ಪ್ರೀತಿಸಿ, ಪೋಷಕರನ್ನು ವಿರೋಧಿಸಿ ಮದುವೆಯಾಗಿದ್ದರು. ಆದರೆ ಅಮೃತಾ ಪೋಷಕರು ನಡು ರಸ್ತೆಯಲ್ಲೇ ಕತ್ತಿ ಬೀಸಿ ಪ್ರಣಯ್‌ನನ್ನು ಹತ್ಯೆ ಮಾಡಿದ್ದರು. ಈ ವಿಷಯ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ADVERTISEMENT

‘ನನ್ನ ಅನುಮತಿಯಿಲ್ಲದೇ ರಾಮ್‌ಗೋಪಾಲ್ ವರ್ಮಾ ನನ್ನ ಜೀವನಕಥೆಯನ್ನು ಸಿನಿಮಾ ಮಾಡುತ್ತಿದ್ದಾರೆ, ಅಲ್ಲದೇ ಕೆಲವೊಂದು ಸತ್ಯಗಳನ್ನು ನಾಶ ಮಾಡಿದ್ದಾರೆ’ ಎಂದು ಅಮೃತಾ ನ್ಯಾಯಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

‘ನನ್ನ ಗಂಡ ಪ್ರಣಯ್ ಕೊಲೆ ಹಾಗೂ ಐದು ತಿಂಗಳ ತಂದೆ ಮಾರುತಿ ರಾವ್ ಅವರ ಆತ್ಮಹತ್ಯೆಯ ಪ್ರಕರಣಗಳಿಂದ ನಾನು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದೇನೆ. ಆದರೆ ವರ್ಮಾ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಮೂಲಕ ಹಣ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

’ನನ್ನ ಮತ್ತು ಕುಟುಂಬ ಸದಸ್ಯರ ಹೆಸರು ಮತ್ತು ಚಿತ್ರಗಳನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಚಿತ್ರವನ್ನು ನಿಲ್ಲಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಅಮೃತಾ.

ನಲಗೊಂಡ ನ್ಯಾಯಾಲಯ ಈ ಪ್ರಕರಣವನ್ನು ಎಸ್‌ಸಿ/ಎಸ್‌ಟಿ ಪ್ರಕರಣ ಎಂದು ಪರಿಗಣಿಸಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಅಲ್ಲದೇ ಆಗಸ್ಟ್‌ 6 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮರ್ಡರ್ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನೋಟಿಸ್‌ ನೀಡಿದೆ. ಇ–ಮೇಲ್ ಹಾಗೂ ವಾಟ್ಸ್‌ಆ್ಯಪ್ ಮೂಲಕ ಆರೋಪಿಗಳಿಗೆ ನೋಟಿಸ್ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.