ADVERTISEMENT

ಅಮೃತ ಅಪಾರ್ಟ್​​ಮೆಂಟ್ಸ್ ಫಸ್ಟ್‌ ಲುಕ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 8:43 IST
Last Updated 18 ಮಾರ್ಚ್ 2021, 8:43 IST

ಜಿ9 ಕಮ್ಯೂನಿಕೇಷನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ‘ಅಮೃತಾ ಅಪಾರ್ಟ್‌ಮೆಂಟ್ಸ್‌’. ಈ ಚಿತ್ರದ ರಚನೆ, ನಿರ್ಮಾಣ ಮತ್ತು ನಿರ್ದೇಶನ‌ ಗುರುರಾಜ್ ಕುಲಕರ್ಣಿ (ನಾಡಗೌಡ) ಅವರದ್ದು. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ನಡೆಯಿತು. ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ನಟಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಭಾಗವಹಿಸಿದ್ದರು.

ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೇ ‘ಅಮೃತಾ ಅಪಾರ್ಟ್‌ಮೆಂಟ್ಸ್‌’ ಸಿನಿಮಾ ಹೊಂದಿದೆ.

‘ಇಡೀ ತಂಡಕ್ಕೆ ಈ ಸಿನಿಮಾ ಅಮೃತವನ್ನು ಉಣಿಸಲಿ’ ಎಂದರು ಕೆಸಿಎನ್ ಚಂದ್ರಶೇಖರ್.

ADVERTISEMENT

‘ಗುರುರಾಜ್ ತುಂಬ ಫ್ಯಾಷನೇಟ್ ನಿರ್ದೇಶಕರು. ಅಷ್ಟೇ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ. ಅವರ ಆಕ್ಸಿಡೆಂಟ್ ಚಿತ್ರದಲ್ಲಿಯೇ ಅವರ ಕೆಲಸವನ್ನು ನೋಡಿದ್ದೆ. ಲಾಸ್ಟ್ ಬಸ್ ಚಿತ್ರದಲ್ಲಿಯೂ ನೋಡಿದ್ದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದರು ವಿಜಯಲಕ್ಷ್ಮಿ ಸಿಂಗ್.

‘ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ಬಾಲಾಜಿ ಮನೋಹರ, ಇದು ಸಣ್ಣ ಬಜೆಟ್ನ ಸಿನಿಮಾ. ಆದರೆ, ದೊಡ್ಡ ಐಡಿಯಾದೊಂದಿಗೆ ತಯಾರಾಗಿದೆ. ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು. ತಾರಕ್ ಪೊನ್ನಪ್ಪ ಚಿತ್ರದ ನಾಯಕ ನಟ.

ಇನ್ನು ಚಿತ್ರದಲ್ಲಿ ಎಸಿಪಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಮಾನಸಾ ಜೋಷಿ. ಲಾಸ್ಟ್ ಬಸ್ ಸಿನಿಮಾದ ಬಹುತೇಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ‘ಬಾಲಾಜಿ ಮನೋಹರ್ ಅವರ ಜತೆ ನಟಿಸಬೇಕಿತ್ತು ಎಂಬ ಆಸೆಯನ್ನು ಈ ಸಿನಿಮಾದ ಮೂಲಕ ಈಡೇರಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ನಾನು ಎಸಿಪಿ ರತ್ನಪ್ರಭ ಪಾತ್ರ ಮಾಡಿದ್ದೇನೆ’ ಎಂದರು ಮಾನಸಾ.

‘ಇದು ಬೆಂಗಳೂರಿನ ಕಥೆ. ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಿದ್ದೇವೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು’ ಎಂದರು ನಿರ್ದೇಶಕ, ನಿರ್ಮಾಪಕ ಗುರುರಾಜ್ ಕುಲಕರ್ಣಿ.

ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ, ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎ.ಎಂ.ಶಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್ ಡಾ.ಬಿ.ಆರ್.ಪೊಲೀಸ್ ಪಾಟೀಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಚಿತ್ರದಲ್ಲಿ ತಾರಕ್ ಪೊನ್ನಪ್ಪ ನಾಯಕ, ಊರ್ವಶಿ ಗೋವರ್ಧನ್ ನಾಯಕಿ. ಬಾಲಾಜಿ ಮನೋಹರ್ ವಿಶೇಷ ಪಾತ್ರದಲ್ಲಿದ್ದಾರೆ. ಸೀತಾ ಕೋಟೆ ವಕೀಲೆಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಾಲತೇಶ್, ಸಿತಾರ, ಜಗದೀಶ್ ಜಾಲಾ, ಅರುಣ್ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಪಾತ್ರವರ್ಗದಲ್ಲಿದ್ದಾರೆ. ಸುನೀಲ್ ಆರ್.ಡಿ. ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದಾರೆ. ಹರೀಶ್ ಕಾರ್ಯಕಾರಿ ನಿರ್ಮಾಪಕರು, ಮಾರ್ಸ್ ಸುರೇಶ್ ವಿತರಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.