‘ಪಾತ್ರಕ್ಕಾಗಿ ಪಲ್ಲಂಗ’ (ಕಾಸ್ಟಿಂಗ್ ಕೌಚ್) ಭಾರತೀಯ ಚಿತ್ರರಂಗಕ್ಕೆ ಕಾಡುತ್ತಿರುವ ಅಂಟುಜಾಡ್ಯ. ಈ ಅನಿಷ್ಟ ಪದ್ಧತಿಯ ಬಲೆಯೊಳಗೆ ಸಿಲುಕಿದ ಹಲವು ಹೀರೊಯಿನ್ಗಳ ಬದುಕು ಹೈರಾಣಾಗಿದೆ. ಗ್ಲಾಮರ್ ಲೋಕದ ಮಾಯೆ ಅರಿಯದೆ ಹಲವು ನಟೀಮಣಿಯರು ಕಾಮಕಾಂಡಕ್ಕೂ ತಳ್ಳಲ್ಪಟ್ಟಿದ್ದಾರೆ.
ಮಲಯಾಳದ ನಟಿ ಪಾರ್ವತಿಯಿಂದ ಹಿಡಿದು ಐಶ್ವರ್ಯ ರಾಜೇಶ್ವರೆಗೂ ಹಲವು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು, ಇದರ ನಿರ್ಮೂಲನೆಗೂ ಹೋರಾಡುತ್ತಿದ್ದಾರೆ. ತೆಲುಗಿನ ನಟಿ ಶ್ರೀರೆಡ್ಡಿ ‘ಪಾತ್ರಕ್ಕಾಗಿ ಪಲ್ಲಂಗ’ದ ಹೆಸರಿನಲ್ಲಿ ತಮಗಾದ ಅನ್ಯಾಯದ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದಾರೆ. ಆಕೆ ಸ್ಟಾರ್ ನಟರ ವಿರುದ್ಧವೇ ಸಮರಕ್ಕೆ ಇಳಿದಿರುವುದು ಉಂಟು.
ಇತ್ತೀಚೆಗೆ ‘ಬಾಹುಬಲಿ’ ಸರಣಿ ಸಿನಿಮಾಗಳ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ತಾವು ಕಾಸ್ಟಿಂಗ್ ಕೌಚ್ನಿಂದ ಪಾರಾದ ಬಗೆಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿರುವುದು ಟಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅನುಷ್ಕಾ ಪ್ರಕಾರ ಟಾಲಿವುಡ್ನಲ್ಲೂ ಕಾಸ್ಟಿಂಗ್ ಕೌಚ್ ಇದೆಯಂತೆ. ಆದರೆ, ನಾನು ಅಂತಹ ಪರಿಸ್ಥಿತಿಯನ್ನು ಎದುರಿಸಿಲ್ಲ ಎನ್ನುವುದು ಆಕೆಯ ಹೇಳಿಕೆ.
‘ನಾನು ಗಟ್ಟಿಗಿತ್ತಿ. ಹಾಗಾಗಿಯೇ, ಇಂತಹ ಅನಿಷ್ಟ ಪದ್ಧತಿಯನ್ನು ಮೆಟ್ಟಿನಿಲ್ಲಲು ಸಾಧ್ಯವಾಯಿತು. ತೆಲುಗು ಚಿತ್ರರಂಗದಲ್ಲಿ ನನ್ನನ್ನು ಇಂದಿಗೂ ಯಾರೊಬ್ಬರು ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ. ಚಿತ್ರರಂಗ ಪ್ರವೇಶಿಸುವ ಹೊಸಬರಿಗೆ ಇಂತಹ ಅನುಭವವಾಗುತ್ತಿರುವುದು ನೋವಿನ ಸಂಗತಿ’ ಎಂದು ವಿಷಾದಿಸಿದ್ದಾರೆ.
‘ನನ್ನ ನೇರ ನಡೆ– ನುಡಿಯ ವ್ಯಕ್ತಿತ್ವವೇ ವೃತ್ತಿಬದುಕಿಗೆ ವರದಾನವಾಗಿದೆ. ಹಾಗಾಗಿ, ಅಂತಹ ಪರಿಸ್ಥಿತಿಯನ್ನು ನಾನು ಎದುರಿಸಿಲ್ಲ. ಕಾಸ್ಟಿಂಗ್ ಕೌಚ್ನಂತಹ ಪದ್ಧತಿಗೆ ಬಲಿಯಾಗಿ ಸಿನಿಮಾದಲ್ಲಿ ನಟಿಸುವ ಅಗತ್ಯವಿದೆಯೇ ಎಂಬುದನ್ನು ಚಿತ್ರರಂಗಕ್ಕೆ ಬರುವವರೇ ನಿರ್ಧರಿಸಬೇಕು’ ಎಂದು ಹೇಳಿದ್ದಾರೆ ಅನುಷ್ಕಾ.
ಹೇಮಂತ್ ಮಧುಕರ್ ನಿರ್ದೇಶನದ ‘ನಿಶ್ಯಬ್ದಂ’ ಚಿತ್ರದಲ್ಲಿ ಅನುಷ್ಕಾ ನಟಿಸಿದ್ದಾರೆ. ಮರ್ಡರ್ ಮಿಸ್ಟರಿ ಕಥೆ ಇದು. ಕೋನ ವೆಂಕಟ್ ಇದಕ್ಕೆ ಬಂಡವಾಳ ಹೂಡಿದ್ದಾರೆ.ಮಾಧವನ್, ಅಂಜಲಿ, ಶಾಲಿನಿ ಪಾಂಡೆ ಮತ್ತು ಹಾಲಿವುಡ್ ನಟ ಮೈಕಲ್ ಮ್ಯಾಡ್ಸೆನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾವೂ ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಚಿತ್ರತಂಡದಿಂದ ಇನ್ನೂ ಅಧಿಕೃತ ನಿರ್ಧಾರ ಹೊರಬಿದ್ದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.