ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟ ಶಿವರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವುದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ನಟ ರಾಜ್ ಬಿ.ಶೆಟ್ಟಿ ಅವರೂ ಇದೀಗ ಈ ಚಿತ್ರತಂಡ ಸೇರಿಕೊಂಡಿದ್ದಾರೆ.
‘45’ ಎಂಬ ಶೀರ್ಷಿಕೆಯಡಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಸ್ವತಃ ಅರ್ಜುನ್ ಜನ್ಯ ಅವರೇ ಚಿತ್ರಕಥೆ ಬರೆದಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಯಶಸ್ಸಿನ ಬಳಿಕ,ರಾಜ್ ಬಿ.ಶೆಟ್ಟಿ ಇದೀಗ ನಟಿ ರಮ್ಯಾ ಅವರ ಜೊತೆಗೂಡಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಪ್ರೊಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ನಡುವೆಯೇ ಮತ್ತೊಂದು ಸಿನಿಮಾವನ್ನು ರಾಜ್ ಒಪ್ಪಿಕೊಂಡಿದ್ದಾರೆ. ಅವರ ಪಾತ್ರದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರವನ್ನು ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ಅವರೇ, ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಶಿವರಾಜ್ಕುಮಾರ್ ಕುಮಾರ್ ಅವರ ಸಿನಿಪಯಣಕ್ಕೆ ತಿರುವು ನೀಡಿದ್ದ ‘ಓಂ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಟ, ನಿರ್ದೇಶಕ ಉಪೇಂದ್ರ ಅವರೂ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಈ ಚಿತ್ರ ಆರಂಭದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.