ADVERTISEMENT

ಜನ್ಯಗೆ ಕಾಯುತ್ತಿರುವ ಅವತಾರ ಪುರುಷ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 19:30 IST
Last Updated 16 ಮಾರ್ಚ್ 2020, 19:30 IST
ಸಿಂಪಲ್‌ ಸುನಿ
ಸಿಂಪಲ್‌ ಸುನಿ   

ಸಿಂಪಲ್‌ ಸುನಿ ಆ್ಯಕ್ಷನ್‌ ಕಟ್‌ ಹೇಳಿರುವ ಶರಣ್‌ ಮತ್ತು ಆಶಿಕಾ ನಟಿಸಿರುವ ‘ಅವತಾರ ಪುರುಷ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಮೂರು ಹಾಡುಗಳ ಕಂಪೋಸ್‌ ಮತ್ತು ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ.

ಅರ್ಜುನ್‌ ಜನ್ಯ ಇತ್ತೀಚೆಗಷ್ಟೇ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಆಂಜಿಯೋಪ್ಲಾಸ್ಟ್‌ ಚಿಕಿತ್ಸೆ ಮಾಡಿಸಿಕೊಂಡಿರುವ ಅವರು ವಿಶ್ರಾಂತಿಯಲ್ಲಿದ್ದಾರೆ. ಅವರು ಚೇತರಿಸಿಕೊಂಡು ಸಂಗೀತ ಸಂಯೋಜನೆಗೆ ವಾಪಸಾಗುವುದನ್ನೇ ಚಿತ್ರತಂಡ ಎದುರು ನೋಡುತ್ತಿದೆ.

‘ಈಗಾಗಲೇ, 62 ದಿನಗಳ ಶೂಟಿಂಗ್‌ ಮುಗಿಸಿದ್ದೇವೆ. ಮೂರು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಜನ್ಯ ಚೇತರಿಸಿಕೊಂಡು ಬಂದ ನಂತರ ಹಾಡುಗಳ ಚಿತ್ರೀಕರಣ ಕೈಗೆತ್ತಿಕೊಳ್ಳುತ್ತೇವೆ. ಯುರೋಪ್‌ನಲ್ಲಿ ಒಂದು ಹಾಡಿನ ಶೂಟಿಂಗ್‌ ನಡೆಸಲು ನಿರ್ಧರಿಸಲಾಗಿತ್ತು. ಕೊರೊನಾ ಸೋಂಕಿನ ಭೀತಿಯಿಂದಾಗಿ ವಿದೇಶ ಪ್ರವಾಸ ಕೈಬಿಡಲಾಗಿದೆ. ಬೆಂಗಳೂರಿನಲ್ಲೇ ಆ ಹಾಡಿನ ಚಿತ್ರೀಕರಣಕ್ಕೆ ನಿರ್ಧರಿಸಲಾಗಿದೆ’ ಎಂದು ನಿರ್ದೇಶಕ ಸಿಂಪಲ್‌ ಸುನಿ ‘ಪ್ರಜಾಪ್ಲಸ್‌’ಗೆ ತಿಳಿಸಿದರು.

ADVERTISEMENT

‘ರ‍್ಯಾಂಬೊ 2’ ಚಿತ್ರದಲ್ಲೂ ಶರಣ್‌– ಆಶಿಕಾ ಜೋಡಿ ‘ಚುಟು ಚುಟು...’ ಹಾಡಿಗೆ ಹೆಜ್ಜೆ ಹಾಕಿತ್ತು. ಕನ್ನಡದಲ್ಲಿ ಹೊಸ ದಾಖಲೆ ಬರೆದ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು ಅರ್ಜುನ್ ಜನ್ಯ. ‘ಅವತಾರ ಪುರುಷ’ದಲ್ಲೂ ಈ ಜೋಡಿ ಇಂತಹದ್ದೆ ಮೋಡಿ ಮಾಡುವ ನಿರೀಕ್ಷೆಯಿದೆ. ಇದರಲ್ಲಿಯೂ ‘ಚುಟು ಚುಟು...’ ಹಾಡು ನೆನಪಿಸುವ ರೀತಿಯಲ್ಲೇ ಉತ್ತರ ಕರ್ನಾಟಕ ಶೈಲಿಯ ಹಾಡೊಂದು ಇದೆಯಂತೆ.

ನಾಯಕನ ಇಂಟ್ರಡಕ್ಷನ್‌, ರೊಮ್ಯಾಂಟಿಕ್‌ ಹಾಡು ಸೇರಿ ಒಟ್ಟು ಮೂರು ಹಾಡುಗಳಿಗೆ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಜತೆಗೆ ಇದಕ್ಕೆ ಹಿನ್ನೆಲೆ ಸಂಗೀತ ನೀಡಿರುವುದೂ ಅವರೇ. ಪುಷ್ಕರ್‌
ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.