ADVERTISEMENT

‘ಪಿಂಗಾರ’ ಚಿತ್ರಕ್ಕೆ ಅತ್ಯುತ್ತಮ ತುಳು ಚಲನಚಿತ್ರ ರಾಷ್ಟ್ರಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 6:43 IST
Last Updated 26 ಅಕ್ಟೋಬರ್ 2021, 6:43 IST
ಪ್ರಶಸ್ತಿಯೊಂದಿಗೆ ಅವಿನಾಶ್‌ ಯು.ಶೆಟ್ಟಿ ಹಾಗೂ ಪ್ರೀತಮ್‌ ಶೆಟ್ಟಿ
ಪ್ರಶಸ್ತಿಯೊಂದಿಗೆ ಅವಿನಾಶ್‌ ಯು.ಶೆಟ್ಟಿ ಹಾಗೂ ಪ್ರೀತಮ್‌ ಶೆಟ್ಟಿ   

ಬೆಂಗಳೂರು: 2019ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರದ ಇತರೆ ಭಾಷೆಗಳಲ್ಲಿನ ಚಲನಚಿತ್ರ ವಿಭಾಗದಲ್ಲಿ ‘ಪಿಂಗಾರ’ ಚಿತ್ರವು ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿ ಪಡೆದಿದೆ.

ಚಿತ್ರದ ನಿರ್ಮಾಪಕ ಅವಿನಾಶ್‌ ಯು. ಶೆಟ್ಟಿ ಹಾಗೂ ನಿರ್ದೇಶಕ ಪ್ರೀತಮ್‌ ಶೆಟ್ಟಿ ಅವರು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ‘ಕರಾವಳಿ ಭಾಗದಲ್ಲಿ ದೇವರ ಆರಾಧನೆಗಿಂತ ದೈವಾರಾಧನೆ ಸಂಸ್ಕೃತಿ ಹೆಚ್ಚಾಗಿದೆ. ದೈವವನ್ನು ತಮ್ಮ ಮೇಲೆ ಆವರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವವರು ಸಮಾಜದ ಹಿಂದುಳಿದ ದಲಿತ ಜಾತಿಯವರೇ ಆದರೂ, ಅವರನ್ನು ಕ್ಷಣಿಕವಾಗಿ ದೇವರೆಂದೇ ಪರಿಗಣಿಸಲಾಗುತ್ತದೆ. ‘ಪಿಂಗಾರ’ ಚಿತ್ರದ ಕಥೆಯನ್ನು ಈ ಅಪರೂಪದ ಸಂಸ್ಕೃತಿಯ ಸುತ್ತ ಹೆಣೆಯಲಾಗಿದೆ’ ಎಂದಿದೆ ಚಿತ್ರತಂಡ.

ತುಳು ಚಿತ್ರರಂಗ ಹಾಗೂ ರಂಗಭೂಮಿಯ ಖ್ಯಾತ ಕಲಾವಿದರಾದ ನೀಮಾರೇ, ಶರಣ್‌ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನ ಚಂದ್ರಮೋಹನ್‌, ಸುನಿಲ್‌ ನೆಲ್ಲಿಗುಡ್ಡೆ ಹಾಗೂ ಪ್ರಶಾಂತ್‌ ಸಿ.ಕೆ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರೀತಮ್‌ ಶೆಟ್ಟಿ ಅವರೇ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಶಶಿರಾಜ್‌ ರಾವ್‌ ಕಾವೂರ್‌ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ವಿ.ಪವನ್‌ ಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.