ADVERTISEMENT

ಚಾಲೆಂಜಿಂಗ್ ಸ್ಟಾರ್ ದಚ್ಚು ಜನ್ಮದಿನಕ್ಕೆ‌ ಬಂದ ಮೊಲ, ಬಾತುಕೋಳಿ!

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 8:40 IST
Last Updated 16 ಫೆಬ್ರುವರಿ 2020, 8:40 IST
ನಟ ದರ್ಶನ್
ನಟ ದರ್ಶನ್   

ಬೆಂಗಳೂರು: 'ಅಭಿಮಾನಿಗಳೇ‌ ನನ್ನ ಆಸ್ತಿ. ಅವರ ಪ್ರೀತಿಗೆ ‌ಬೆಲೆ‌ಕಟ್ಟಲು ಸಾಧ್ಯವಿಲ್ಲ. ನನಗೆ ಅವರ ಆಯುಷ್ಯ ಬೇಡ. ಪ್ರೀತಿ, ವಿಶ್ವಾಸವಿದ್ದರೆ ಸಾಕು' ಎಂದು ನಟ ದರ್ಶನ್ ಹೇಳಿದರು.

ಇಲ್ಲಿನ ರಾಜರಾಜೇಶ್ವರಿ ‌ನಗರದಲ್ಲಿರುವ ಅವರ ನಿವಾಸದ ಮುಂದೆ ಭಾನುವಾರ ಮಾತನಾಡಿದ ಅವರು, 'ಅಭಿಮಾನಿಗಳು ಹಿಂದಿನ ವರ್ಷದಂತೆಯೇ ಈ ಬಾರಿಯೂ ನನ್ನ ಹುಟ್ಟುಹಬ್ಬಕ್ಕೆ ದವಸ ಧಾನ್ಯಗಳನ್ನು ‌ನೀಡುತ್ತಿದ್ದಾರೆ. ಅವರು‌ ನೀಡಿದ್ದನ್ನು‌ ಒಂದೆಡೆ ಸಂಗ್ರಹಿಸಲಾಗುತ್ತಿದ್ದು, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ‌ ನೀಡಲಾಗುವುದು. ಕೆಲವು ಅಭಿಮಾನಿಗಳು ಮೊಲ, ಬಾತುಕೋಳಿಗಳನ್ನು‌ ನೀಡಿದ್ದಾರೆ. ಅವುಗಳನ್ನು ನನ್ನ ಫಾರ್ಮ್‌ ಹೌಸ್‌ಗೆ‌ ಕಳುಹಿಸುತ್ತೇನೆ' ಎಂದು ತಿಳಿಸಿದರು.

ಏಪ್ರಿಲ್‌ಗೆ 'ರಾಬರ್ಟ್' ಚಿತ್ರ ತೆರೆಗೆ

ADVERTISEMENT

'ರಾಬರ್ಟ್' ಚಿತ್ರ ಏಪ್ರಿಲ್‌‌ಗೆ ತೆರೆ ಕಾಣಲಿದೆ.‌ ಇದರ‌‌ ಡಬ್ಬಿಂಗ್ ನಡೆಯುತ್ತಿದೆ.‌ ಇದು ನನ್ನ ಸಿನಿಮಾವಲ್ಲ. ನಿರ್ದೇಶಕ ತರುಣ್‌‌ ಸುಧೀರ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ‌ ಚಿತ್ರ ಎಂದರು.

'ಮುನಿರತ್ನ ಕುರುಕ್ಷೇತ್ರ' ಸಿನಿಮಾ ಶತದಿನಗಳನ್ನು ಪೂರೈಸಿದೆ. ಇದು‌ ನನಗೆ ಖುಷಿ ‌ನೀಡಿದೆ. ನಿರ್ಮಾಪಕರು ಇದರ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರಲ್ಲಿ ಪಾಲ್ಗೊಂಡು ನೆನಪಿನ‌ ಕಾಣಿಕೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

'ರಾಜವೀರ ಮದಕರಿ ನಾಯಕ' ಚಿತ್ರದ‌ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇವೆ. ಮುಂದಿನ ಹಂತದ ಶೂಟಿಂಗ್ ಬಗ್ಗೆ ಶೀಘ್ರವೇ ಮಾಹಿತಿ‌‌ ನೀಡುತ್ತೇವೆ. ಈ ಚಿತ್ರ ಹೆಚ್ಚಿನ ಸಮಯ ‌ಬೇಡಲಿದೆ.‌ ಹಾಗಾಗಿ, ಇದರ ಶೂಟಿಂಗ್ ಮುಗಿಯುವವರೆಗೂ ಮತ್ತೆ ಯಾವುದೇ ಸಿನಿಮಾ ಮಾಡುವುದಿಲ್ಲ. ಹಾಗಾಗಿಯೇ, ಈಗ ರಾಬರ್ಟ್ ಚಿತ್ರದ ಟೀಸರ್‌‌ ಬಿಟ್ಟಿದ್ದೇವೆ ಎಂದು ‌ವಿವರಿಸಿದರು.

ನಂಗೆ ಇಂಗ್ಲಿಷ್ ಬರಲ್ಲ

ಇದೇ ವೇಳೆ‌ ಆಂಗ್ಲಭಾಷೆ ಪತ್ರಿಕೆಯ ‌ಪತ್ರಕರ್ತರು‌‌‌ ಇಂಗ್ಲಿಷ್‌‌ನಲ್ಲಿ‌ ಮಾತನಾಡುವಂತೆ ದರ್ಶನ್‌ಗೆ ಕೋರಿದರು. ಇದಕ್ಕೆ ಉತ್ತರಿಸಿದ ಅವರು, ನಾನು ಓದಿರುವುದು ಕಾರ್ಪೋರೇಷನ್‌ ಸ್ಕೂಲ್‌ನಲ್ಲಿ. ಹಾಗಾಗಿ, ನಂಗೆ ಇಂಗ್ಲಿಷ್ ಮಾತನಾಡಲು‌ ಬರುವುದಿಲ್ಲ‌ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.