‘ಮೆಗಾಸ್ಟಾರ್’ ಚಿರಂಜೀವಿಯ ಅಭಿಮಾನಿಗಳಿಗೆ ಗಣೇಶ ಚತುರ್ಥಿಯಂದು (ಆ.22) ಸಂಭ್ರಮಪಡಲು ಕಾರಣವಿದೆ. ಅಂದು ಚಿರಂಜೀವಿ ಅಭಿನಯದ 152ನೇ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ.
ಈ ಚಿತ್ರಕ್ಕೆ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಇನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಮಾತಿನ ವೇಳೆ ಚಿರಂಜೀವಿಯವರೇ ಮುಂದಿನ ಚಿತ್ರದ ಹೆಸರು ‘ಆಚಾರ್ಯ’ ಎಂದು ಈಗಾಗಲೇ ಹೇಳಿರುವುದರಿಂದ ಆಚಾರ್ಯನ ಫಸ್ಟ್ ಲುಕ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
ಫಸ್ಟ್ಲುಕ್ ಮತ್ತು ಮೋಷನ್ ಪೋಸ್ಟರ್ ಹಂಚಿಕೊಳ್ಳುತ್ತಿರುವ ಮಾಹಿತಿಯನ್ನು ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದು ಚಿರಂಜೀವಿ ನಟನೆಯ 152ನೇ ಚಿತ್ರವಾಗಿರುವುದರಿಂದ ಪೋಸ್ಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರತಂಡ ಮೆಗಾಸ್ಟಾರ್ ಅವರ ‘ಚಿರು 152’ ಚಿತ್ರ ಎಂದು ಉಲ್ಲೇಖಿಸುತ್ತಿದೆ.
ಶ್ರೀಕಾಕುಳಂನ ನಕ್ಸಲೀಯ ನಾಯಕನೊಬ್ಬಸಾಮಾಜಿಕ ಕಾರ್ಯಕರ್ತನಾಗಿ ಬದಲಾದ ಕಥಾಹಂದರವನ್ನು ಕೊರಟಾಲ ತೆರೆಮೇಲೆ ತರುತ್ತಿದ್ದಾರೆ. ನಕ್ಸಲೀಯ ನಾಯಕನ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಯುವ ನಕ್ಸಲ್ ಪಾತ್ರದಲ್ಲಿ ಚಿರು ಬದಲಿಗೆ ಅವರ ಪುತ್ರ ರಾಮ್ಚರಣ್ ನಟಿಸುತ್ತಿದ್ದು, ಅಪ್ಪನೊಂದಿಗೆ ಪುತ್ರ ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಚಿರಂಜೀವಿಗೆ ನಾಯಕಿಯಾಗಿ ನಟಿಸಬೇಕಿದ್ದ ತ್ರಿಷಾ ಚಿತ್ರದಿಂದ ಹೊರಬಂದ ಮೇಲೆ ಅವರ ಜಾಗಕ್ಕೆ ಕಾಜಲ್ ಅಗರ್ವಾಲ್ ಹೆಸರು ಕೇಳಿಬಂದಿತ್ತು. ಆದರೆ, ನಾಯಕಿ ಯಾರಾಗಲಿದ್ದಾರೆ ಎನ್ನುವುದನ್ನು ಚಿತ್ರತಂಡ ಇನ್ನು ಬಹಿರಂಗಪಡಿಸಿಲ್ಲ.
ಕೊನಿದೆಲಾ ಪ್ರೊಡಕ್ಷನ್ ಮತ್ತು ಮ್ಯಾಟಿನಿ ಎಂಟರ್ಟೈನ್ಮೆಂಟ್ ಬ್ಯಾನರ್ನಡಿಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಮಣಿ ಶರ್ಮ ಸಂಗೀತ ಸಂಯೋಜನೆ ಇದೆ. ಛಾಯಾಗ್ರಹಣ ತಿರುನಾವುಕ್ಅರಸು ಅವರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.