ADVERTISEMENT

ವಿಜಯನಗರ: ‘ದಂತ ಪುರಾಣ’ ಚಿತ್ರದ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 18:04 IST
Last Updated 6 ಜೂನ್ 2022, 18:04 IST
   

ಹೊಸಪೇಟೆ (ವಿಜಯನಗರ): ಅಚ್ಯುತ ಬಾಲಾಜಿ ಕ್ರಿಯೇಶನ್ಸ್‌ನಲ್ಲಿ ಮೂಡಿ ಬಂದಿರುವ ಸರಜೂ ಕಾಟ್ಕರ್‌ ಅವರ ‘ಗೌರೀಪುರ’ ಕಾದಂಬರಿ ಆಧಾರಿತ ‘ದಂತಪುರಾಣ’ ಚಲನಚಿತ್ರದ ಆಡಿಯೋ, ಟೀಸರ್‌ ಹಾಗೂ ಪೋಸ್ಟರ್‌ ಬಿಡುಗಡೆ ಸಮಾರಂಭ ಸೋಮವಾರ ರಾತ್ರಿ ನಗರದಲ್ಲಿ ನಡೆಯಿತು.

ಜೋಗದ ದಿಗಂಬರ ರಾಜಾ ಭಾರತಿ ಮಹಾರಾಜ ಸ್ವಾಮೀಜಿ ಪೋಸ್ಟರ್‌ ಬಿಡುಗಡೆ ಮಾಡಿ, ನಾಡಿನ ಸಂಸ್ಕೃತಿ ಎತ್ತಿ ತೋರಿಸುವ ಕೆಲಸ ಸಿನಿಮಾದ ಮೂಲಕ ಮಾಡಲಾಗಿದೆ. ಅಜ್ಜಿ, ಮೊಮ್ಮಕ್ಕಳ ಸಂಬಂಧದ ಮೇಲೆ ಬೆಳಕು ಚೆಲ್ಲಲಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ‘ರಕ್ತ ಸಂಬಂಧ, ಸಂಸ್ಕೃತಿ, ಆಚಾರ–ವಿಚಾರ, ನಮ್ಮ ಪರಂಪರೆಯ ಪ್ರತೀಕವಾಗಿರುವ ದೇವಸ್ಥಾನಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ’ ಎಂದರು.

ನಟ ಅಜೇಯ್‌ ರಾವ್‌ ಮಾತನಾಡಿ, ಈ ಚಿತ್ರದಲ್ಲಿ ಹೊಸಪೇಟೆಯ ಅನೇಕ ಜನ ಕಲಾವಿದರು ನಟಿಸಿದ್ದಾರೆ. ಚಿತ್ರ ಬಿಡುಗಡೆಗೊಂಡ ನಂತರ ಸಿನಿಮಾ ಮಂದಿರಕ್ಕೆ ಹೋಗಿ ಎಲ್ಲರೂ ಟಿಕೆಟ್‌ ಖರೀದಿಸಿ ನೋಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಚಪ್ಪಾಳೆ ತಟ್ಟಿದರೆ ಸಾಲದು ಎಂದು ಹೇಳಿದರು.

ರಂಗಕರ್ಮಿ ಕೆ. ನಾಗರತ್ನಮ್ಮ, ಉದ್ಯಮಿ ಕೆ. ಶ್ರೀನಿವಾಸ, ನಿರ್ಮಾಪಕ ನವೀನ ಶರ್ಮಾ, ನಿರ್ದೇಶಕ ವಿಶಾಲ್‌ ರಾಜ್‌, ಸಂಗೀತ ನಿರ್ದೇಶಕ ರಮೇಶ, ಯುವ ಮುಖಂಡ ಸಿದ್ದಾರ್ಥ ಸಿಂಗ್‌, ಕವಿತಾ ಈಶ್ವರ್‌ ಸಿಂಗ್‌, ಹೊನ್ನೂರಪ್ಪ, ಅಂಜಲಿ ಬೆಳಗಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.