ADVERTISEMENT

ಈ ವರ್ಷವೂ ಸರಳವಾಗಿ ಹುಟ್ಟುಹಬ್ಬ ಆಚರಿಸಲು ನಟ ದರ್ಶನ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 10:10 IST
Last Updated 20 ಜನವರಿ 2020, 10:10 IST
   
""
""

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ಅವರು ಬಿಡುವು ಸಿಕ್ಕಿದಾಗಲೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಸಲಹೆ, ಸೂಚನೆ ನೀಡುವುದು ಸಾಮಾನ್ಯ. ದಚ್ಚು ಹೇಳಿದರೆಂದರೆ ಅವರ ಅಭಿಮಾನಿಗಳು ಚಾಚುತಪ್ಪದೆ ಪಾಲಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಫೆ. 16 ದರ್ಶನ್‌ ಅವರ ಹುಟ್ಟುಹಬ್ಬ. ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿ ಜನ್ಮ ದಿನ ಆಚರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

‘ರೆಬೆಲ್‌ ಸ್ಟಾರ್‌’ ಅಂಬರೀಷ್‌ ಅವರು ನಿಧನರಾಗಿದ್ದ ಹಿನ್ನೆಲೆಯಲ್ಲಿ ದರ್ಶನ್‌ ಅವರು ಕಳೆದ ವರ್ಷ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಈ ವರ್ಷವೂ ಅವರು ಅದೇ ಹಾದಿ ತುಳಿದಿದ್ದಾರೆ. ಸರಳವಾಗಿ ಹುಟ್ಟುಹಬ್ಬ ಆಚರಿಸುವಂತೆ ಅವರು ಮನೆಯ ಮುಂದೆ ಫಲಕ ಹಾಕಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ, ಪ್ರತಿಯೊಬ್ಬರು ಅರಣ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕು ಎಂದು ಕೋರಿದ್ದಾರೆ.

‌ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ಪ್ರೀತಿಯ ದರ್ಶನ್‌ ತೂಗುದೀಪ ಮಾಡುವ ವಿನಂತಿ. ‘ಬ್ಯಾನರ್‌, ಕೇಕ್‌ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೇ ಧವಸ, ಧಾನ್ಯಗಳನ್ನು ದಾನ ಮಾಡಿ. ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು’ ಎಂದಿದ್ದಾರೆ.

ADVERTISEMENT

ದರ್ಶನ್‌ ಅವರ ಈ ಮನವಿಗೆ ಮೈಸೂರಿನ ಅಭಿಮಾನಿಗಳು ತಕ್ಷಣವೇ ಸ್ಪಂದಿಸಿದ್ದು, ಧವಸ, ಧಾನ್ಯಗಳನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ನೀಡುವ ಸಾಮಗ್ರಿಗಳನ್ನು ಒಂದೆಡೆ ಸಂಗ್ರಹಿಸುವ ಕಾರ್ಯವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.