ADVERTISEMENT

ಪ್ರತಿಷ್ಠಿತ ಕಾನ್​​ ಚಿತ್ರೋತ್ಸವಕ್ಕೆ ಹೊರಟಿತು ‘ದೇವರ ಕನಸು’

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:24 IST
Last Updated 2 ಮೇ 2021, 14:24 IST
‘ದೇವರ ಕನಸು’ ಚಿತ್ರದ ದೃಶ್ಯ
‘ದೇವರ ಕನಸು’ ಚಿತ್ರದ ದೃಶ್ಯ   

‘ದೇವರ ಕನಸು’ ಸಿನಿಮಾ ಪ್ರತಿಷ್ಠಿತ ಕಾನ್‌ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮಿಲೇನಿಯಮ್ ಪ್ರೊಡಕ್ಷನ್ಸ್ ಲಾಂಛನದ ಅಡಿ ಸುರೇಶ್ ಲಕ್ಕೂರ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

12 ವರ್ಷದ ಬಾಲಕನ ಸೈಕಲ್‌ ಕೊಳ್ಳುವ ಕನಸು ಈ ಚಿತ್ರದ ಕಥಾ ಸಾರಾಂಶ. ಸ್ವಂತ ಸೈಕಲ್ ಖರೀದಿಸಿ ಊರಿನ ಸೈಕಲ್ ರೇಸ್‌ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆ.

2019ರಲ್ಲಿಯೇ ಚಿತ್ರೀಕರಣ ಆರಂಭವಾಗಿತ್ತು. ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿದಿದೆ. ಮೇ ಅಂತ್ಯದಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಬೇರೆ ಬೇರೆ ಸಿನಿಮೋತ್ಸವಗಳಿಂದಲೂ ಆಹ್ವಾನ ಬರುತ್ತಿವೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ರತ್ನಜಿತ್ ರಾಯ್ ಅವರ ಛಾಯಾಗ್ರಹಣವಿದೆ. ಅನಿರ್ಬನ್ ಗಂಗೂಲಿ ಧ್ವನಿ ವಿನ್ಯಾಸ, ಸಂಕಲನ ಜಿಸ್ನು ಸೇನ್ ಮಾಡಿದ್ದಾರೆ. ಇವರೆಲ್ಲ ಪಶ್ಚಿಮ ಬಂಗಾಳದವರು. ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್. ಅವರು ಸಂಗೀತ ನೀಡಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮತ್ತೋರ್ವ ಮನೋಜ್ ಅಂಗಮಾಲಿ ಮೇಕಪ್ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕೆ ಸುನಿಲ್ ರಾಮ್ ಕಥೆ ಬರೆದಿದ್ದಾರೆ.

ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಮೊದಲ ಚಿತ್ರವಾಗಿ ದೇವರ ಕನಸು ಅವರ ಬತ್ತಳಿಕೆಯಿಂದ ಹೊರಬಂದಿದ್ದು, ಮಕ್ಕಳ ಸಿನಿಮಾ ಮೂಲಕ ಆಗಮಿಸಿದ್ದಾರೆ. ಚಿಂತಾಮಣಿಯ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ. ಅವರು ಈ ಮೊದಲು ಕನ್ನಡದ ‘ದೃಶ್ಯ’ ಸಿನಿಮಾದಲ್ಲಿ ಕೆಲಸ ಮಾಡಿದ್ದು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರಕ್ಕೆ ಉದ್ಯಮಿಗಳಾದ ಸಿ. ಜಯಕುಮಾರ್, ಸಿ ಶೇಖರ್ ಬಂಡವಾಳ ಹೂಡಿದ್ದಾರೆ. ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಸಹ ನಿರ್ಮಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.