ಪರಕಾಯ ಪ್ರವೇಶದ ಕಥಾವಸ್ತು ಹೊಂದಿರುವ ‘ದೇವಯಾನಿ’ ಸಿನಿಮಾ ಚಿತ್ರೀಕರಣ ಶೇಕಡ 60ರಷ್ಟು ಪೂರ್ಣವಾಗಿದೆಯಂತೆ. ಇದನ್ನು ತಿಳಿಸಲೆಂದೇ ಚಿತ್ರತಂಡವು ಚಿಕ್ಕದಾಗಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು.
ಈ ಚಿತ್ರಕ್ಕೆ ಬಂಡವಾಳ ಹೂಡಿರುವವರು ತೆಲುಗಿನ ಟಿ. ಸುಲ್ತಾನ್. ನಿರ್ದೇಶನದ ಹೊಣೆ ಕನ್ನಡಿಗರಾದ ಕಸ್ತೂರಿ ಜಗನ್ನಾಥ್ ಅವರದ್ದು. ಇವರಿಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾದಾಗ ದುಭಾಷಿಯನ್ನು ನಡುವಿನಲ್ಲಿ ಇರಿಸಿಕೊಂಡು ಸಂವಹನ ನಡೆಸುತ್ತಿದ್ದರಂತೆ! ಅಂದಹಾಗೆ, ಸುಲ್ತಾನ್ ಅವರು ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಿರುವುದು ಇದೇ ಮೊದಲು.
‘ದೇವಯಾನಿ’ ಚಿತ್ರೀಕರಣ ಬೆಂಗಳೂರು ಮತ್ತು ದೇವದುರ್ಗದಲ್ಲಿ ನಡೆದಿದೆ. ಈ ಚಿತ್ರದ ನಾಯಕ ಪರಕಾಯ ಪ್ರವೇಶದ ವಿಷಯದಲ್ಲಿ ಪಿ.ಎಚ್ಡಿ ಸಂಶೋಧನೆಯಲ್ಲಿ ತೊಡಗಿರುತ್ತಾನೆ. ಆತ ಈ ಸಿನಿಮಾದಲ್ಲಿ ಪರಕಾಯ ಪ್ರವೇಶವನ್ನೂ ಮಾಡುತ್ತಾನೆ. ಆತನ ಜೀವನದಲ್ಲಿ ಪ್ರೀತಿಸಿದವಳಿಂದ ಕೆಲವು ತೊಂದರೆಗಳು ಎದುರಾಗುತ್ತವೆಯಂತೆ. ತೊಂದರೆಗಳನ್ನೆಲ್ಲ ನಿವಾರಿಸಿಕೊಂಡು ನಾಯಕ ಹೇಗೆ ಮುಂದೆ ಬರುತ್ತಾನೆ ಎಂಬುದು ಚಿತ್ರದ ಕಥೆ ಎಂದು ಚಿತ್ರತಂಡ ಹೇಳಿದೆ.
ನಾಯಕ ನಟನ ಪಾತ್ರ ನಿಭಾಯಿಸಿದವರು ಗೋಪಿಕೃಷ್ಣ. ರಾಗಾ ಮತ್ತು ಅರ್ಚನಾ ಇದರಲ್ಲಿ ನಾಯಕಿಯರು. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವವರು ರಾಮಮೋಹನ್. ಈ ಸಿನಿಮಾವನ್ನು ಒಟ್ಟು ಎರಡು ಭಾಷೆಗಳಲ್ಲಿ ತೆರೆಗೆ ತರುವ ಉದ್ದೇಶ ಚಿತ್ರತಂಡಕ್ಕೆ ಇದ್ದಂತಿದೆ.
‘ಕೆಟ್ಟದು ಮಾಡಿದವರನ್ನು ಸಾಯಿಸಿಬಿಡುವುದೇ ಪರಿಹಾರ ಅಲ್ಲ ಎನ್ನುವ ಸಂದೇಶ ಸಿನಿಮಾದಲ್ಲಿ ಇದೆ’ ಎಂದು ಚಿತ್ರತಂಡ ಈ ಮೊದಲು ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.