ADVERTISEMENT

ಸದ್ದು ಮಾಡುತ್ತಿದೆ ‘ಧಮ್’ ಟ್ರೇಲರ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 8:35 IST
Last Updated 10 ಆಗಸ್ಟ್ 2022, 8:35 IST
ಶ್ರೀಜಿತ್‌, ಎರಿಕ್‌ ಅಧಿಕಾರಿ
ಶ್ರೀಜಿತ್‌, ಎರಿಕ್‌ ಅಧಿಕಾರಿ   

ಕಳೆದ ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿನಯದಲ್ಲಿ ‘ಧಮ್’ ಎನ್ನುವ ಚಿತ್ರ ಬಂದಿತ್ತು. ಈಗ ಮತ್ತೆ ಅದೇ ಹೆಸರಿನ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡದ ಹುಡುಗ ಶ್ರೀಜಿತ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವಿ.ಆರ್.ಆರ್. ನಿರ್ದೇಶಿಸಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ನಡೆಯಿತು.

‘ನಾನು ಬಾಲನಟನಾಗಿ ‘ಹಾತಿ ಮೇರೆ ಸಾತಿ’ ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ತಾಯಿ ಮೈಸೂರಿನವರು‌. ಅವರಿಗೆ ನಾನು ಕನ್ನಡ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ. ಈ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಈ ಚಿತ್ರದ ನಾಯಕರಾಗಿ ಸಂಚಾರಿ ವಿಜಯ್ ಮಾಡಬೇಕಿತ್ತು. ಕಾರಣಾಂತರದಿಂದ ಅದು ಆಗಲಿಲ್ಲ. ನಂತರ ಶ್ರೀಜಿತ್ ಆಯ್ಕೆಯಾದರು. ಎರೀನ್ ಅಧಿಕಾರಿ ಈ ಚಿತ್ರದ ನಾಯಕಿ. ಶಯ್ಯಾಜಿ ಶಿಂಧೆ, ರವಿಕಾಳೆ, ನಾಗೇಶ್ವರ ರಾವ್, ಗುರುಚಂದ್ರನ್ ತಾರಾಬಳಗದಲ್ಲಿದ್ದಾರೆ. ರಿಹಾನ್ ಅಹಮದ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಳಯರಾಜ ಅವರ ಬಳಿ ಕಾರ್ಯ ನಿರ್ವಹಿಸಿರುವ ಜೀವ ವರ್ಷಿಣಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದರು ನಿರ್ದೇಶಕ ವಿ.ಆರ್.ಆರ್.

‘ನನ್ನ ಸ್ನೇಹಿತನ ಮೂಲಕ ನಿರ್ದೇಶಕರ ಪರಿಚಯವಾಯಿತು. ವಿ.ಆರ್.ಆರ್. ಅವರಂತಹ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಿದ್ದು ಸಂತೋಷವಾಗಿದೆ. ನಾನು ಈ ಹಿಂದೆ ‘ರಂಗ್ ಬಿ ರಂಗಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಇದು ಎರಡನೇ ಚಿತ್ರ. ಆ್ಯಕ್ಷನ್‌, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ನಾಯಕ ಶ್ರೀಜಿತ್.

‘ನಾನು ಮೂಲತಃ ಬಂಗಾಳದವಳು. ಬಂಗಾಳಿ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ’ ಎಂದರು ನಾಯಕಿ ಎರೀನ್ ಅಧಿಕಾರಿ.

ಚಿತ್ರದಲ್ಲಿ ನಟಿಸಿರುವ ನಾಗೇಶ್ವರರಾವ್, ಸಂಗೀತ ನೀಡಿರುವ ಜೀವವರ್ಷಿಣಿ "ಧಮ್" ಚಿತ್ರದ ಬಗ್ಗೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.