ADVERTISEMENT

ತಲ್ವಾರ್‌ನಿಂದ ಕೇಕ್‌ ಕತ್ತರಿಸಿದ ದುನಿಯಾ ವಿಜಯ್‌!

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 22:35 IST
Last Updated 20 ಜನವರಿ 2020, 22:35 IST
ದುನಿಯಾ ವಿಜ‌ಯ್‌
ದುನಿಯಾ ವಿಜ‌ಯ್‌   

ಬೆಂಗಳೂರು: ಅಭಿಮಾನಿಗಳ ಸಮ್ಮುಖ ದಲ್ಲಿ ತಮ್ಮ ಜನ್ಮ ದಿನ ಆಚರಣೆ ಮತ್ತು ‘ಸಲಗ’ ಸಿನಿಮಾದ ಟೀಸರ್ ಬಿಡುಗಡೆ ವೇಳೆ ನಟ ದುನಿಯಾ ವಿಜಯ್ ಅವರು ಕತ್ತಿಯಿಂದ (ತಲ್ವಾರ್) ಕೇಕ್ ಕತ್ತರಿಸಿದ್ದಾರೆ. ಈ ಸಂಬಂಧ ವಿವರಣೆ ಕೇಳಿ ಗಿರಿನಗರ ಪೊಲೀಸರು ವಿಜಯ್ ಅವರಿಗೆ ನೋಟಿಸ್ ನೀಡಿದ್ದಾರೆ.

ಭಾನುವಾರ (ಜ. 19) ದುನಿಯಾ ವಿಜಯ್ 46ನೇ ಜನ್ಮದಿನವನ್ನು ಆಚರಿಸಿದರು. ಈ ಹಿನ್ನೆಲೆಯಲ್ಲಿ ಗಿರಿನಗರದಲ್ಲಿರುವ ಮನೆಯ ಬಳಿ ರಾತ್ರಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ವಿಜಯ್ ಪತ್ನಿ ಹಾಗೂ ಪೋಷಕರೂ ಇದ್ದರು.

ಜನ್ಮ ದಿನ ಆಚರಣೆ ಜೊತೆ ವಿಜಯ್ ಅವರ ಸಿನಿಮಾದ ಒಂದೂವರೆ ನಿಮಿಷದ ಟೀಸರ್‌ ಕೂಡ ಕೇಕ್ ಕಟ್ ಮಾಡುವ ಮೂಲಕ ಬಿಡುಗಡೆ ಮಾಡಲಾಯಿತು.

ADVERTISEMENT

ಬೃಹತ್ ಗಾತ್ರದ ಕೇಕ್ ಕತ್ತರಿಸಲು ಅಲ್ಲಿಯೇ ನೆರೆದಿದ್ದವರ ಪೈಕಿ ಒಬ್ಬರು ವಿಜಯ್ ಕೈಗೆ ಕತ್ತಿ ನೀಡಿದ್ದರು. ಆದರೆ, ಐದು ಇಂಚಿಗೂ ಉದ್ದದ ಕತ್ತಿಯನ್ನು ಯಾರು ಕೂಡ ಬಳಸುವಂತಿಲ್ಲ. ಒಂದು ವೇಳೆ ಇಟ್ಟುಕೊಳ್ಳಲು ಪರವಾನಗಿ ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು ವಿಜಯ್ ಅವರಿಗೆ ನೋಟಿಸ್ ನೀಡಿದ್ದಾರೆ.

‘ನಿಮ್ಮ ಹುಟ್ಟು-ಹಬ್ಬವನ್ನು ರಸ್ತೆಯಲ್ಲಿ ಪೆಂಡಾಲ್ ಹಾಕಿ ಆಚರಿಸಿದ ಪರಿಣಾಮ ವಾಹನಗಳು ಹಾಗೂ ಸಾರ್ವಜನಿಕರಿಗೆ ಅಡ್ಡಿಯಾಗಿದೆ. ಅಲ್ಲದೆ, ಸಾರ್ವಜನಿಕರ ಎದುರು ಅಪಾಯಕಾರಿ ಆಯುಧದಿಂದ ಕೇಕ್ ಕತ್ತರಿಸಿದ್ದೀರಿ. ಇದು ಶಸ್ತ್ರಾಸ್ತ್ರಗಳ ಕಾಯ್ದೆ ಉಲ್ಲಂಘನೆ ಮಾಡಿದಂತಾಗಿರುತ್ತದೆ. ಅಲ್ಲದೆ ಅನುಮತಿ ಪಡೆಯದೇ ಡಿಜೆ ಸೌಂಡ್ ಸಿಸ್ಟಂ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು’ ಎಂದು ಪೊಲೀಸರು ವಿವರಿಸಿದರು.

ಕ್ಷಮೆ ಯಾಚಿಸಿದ ವಿಜಯ್‌: ‘ಕೇಕ್ ಕತ್ತರಿಸುವ ಮೊದಲು ಯಾರೋ ನನ್ನ ಕೈಗೆ ಕತ್ತಿ ಕೊಟ್ಟರು. ನಾನು ಅದನ್ನು ಬಳಸಿ ಕೇಕ್‌ ಕತ್ತರಿಸಿದೆ. ಅದು ಖಂಡಿತವಾಗಿಯೂ ಅಪರಾಧ. ಪೊಲೀಸರು ಕರೆದರೆ ಹೇಳಿಕೆ ನೀಡುತ್ತೇನೆ’ ಎಂದು ವಿಜಯ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.