ADVERTISEMENT

Sandalwood | 7 ವರ್ಷಗಳ ನಂತರ ಬಂದಿರುವೆ: 'S\O ಮುತ್ತಣ್ಣ' ನಟ ಪ್ರಣಮ್ ದೇವರಾಜ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 23:30 IST
Last Updated 20 ಜುಲೈ 2025, 23:30 IST
ಪ್ರಣಮ್‌ ದೇವರಾಜ್‌, ರಂಗಾಯಣ ರಘು, ಖುಷಿ ರವಿ
ಪ್ರಣಮ್‌ ದೇವರಾಜ್‌, ರಂಗಾಯಣ ರಘು, ಖುಷಿ ರವಿ   

ಪ್ರಣಮ್‌ ದೇವರಾಜ್‌, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿರುವ ‘S\O ಮುತ್ತಣ್ಣ’ ಚಿತ್ರ ಆ.22ರಂದು ತೆರೆಗೆ ಬರಲಿದೆ. ಸುದೀರ್ಘ ವಿರಾಮದ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಣಮ್‌, ಚಿತ್ರ ಹಾಗೂ ತಮ್ಮ ಮುಂದಿನ ಸಿನಿಪಯಣದ ಕುರಿತು ಮಾತಿಗೆ ಸಿಕ್ಕರು... 

‘ಚಿತ್ರದಲ್ಲಿ ‘ಶಿವು’ ಎಂಬ ಪಾತ್ರ ಮಾಡಿರುವೆ. ಜೀವನದಲ್ಲಿ ಅನ್ಯೋನ್ಯವಾಗಿರುವ ಅಪ್ಪ–ಮಗನ ಕಥೆ. ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರುವುದಿಲ್ಲ. ಅಪ್ಪ ನಿವೃತ್ತ ಸೇನಾಧಿಕಾರಿ. ಆತನನ್ನು ನೋಡಿಕೊಳ್ಳುವ ಮಗನ ಪಾತ್ರ ನನ್ನದು. ಅಮ್ಮ ಯಾಕೆ ಇಬ್ಬರಿಂದ ದೂರವಾಗಿರುತ್ತಾಳೆ ಎಂಬುದನ್ನು ನೀವು ಚಿತ್ರದಲ್ಲಿಯೇ ನೋಡಬೇಕು’ ಎಂದು ತಮ್ಮ ಪಾತ್ರದ ಪರಿಚಯದೊಂದಿಗೆ ಮಾತು ಪ್ರಾರಂಭಿಸಿದರು ಪ್ರಣಮ್‌. 

‘ಚಿತ್ರದಲ್ಲಿ ಒಂದು ಪ್ರೇಮಕಥೆಯಿದೆ. ಜೀವನದಲ್ಲಿ ಎಲ್ಲ ಖುಷಿಯಾಗಿರುತ್ತದೆ. ಚಿಕ್ಕ ಸಮಸ್ಯೆಯಿಂದ ಅಪ್ಪನ ಜತೆ ಮನಸ್ತಾಪವಾಗುತ್ತದೆ. ಅಪ್ಪ ಮತ್ತು ನಾಯಕಿಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವ ಸನ್ನಿವೇಶಗಳಿವೆ. ಗಿರಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್‌ ಮುಂತಾದವರು ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಜತೆ ನಾಯಕ ಹೇಗೆ ಭಾವನಾತ್ಮಕವಾಗಿ ಸಾಗುತ್ತಾನೆ ಎಂಬುದೇ ಚಿತ್ರಕಥೆ’ ಎಂದರು.

ADVERTISEMENT

‘ಏಳುವರೆ ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಬರುತ್ತಿದ್ದೇನೆ. 2018ರಲ್ಲಿ ‘ವೈರಂ’ ಎಂಬ ಚಿತ್ರ ಪ್ರಾರಂಭಿಸಿದೆ. ಆಮೇಲೆ ಕೋವಿಡ್‌ ಬಂತು. ಆರ್ಥಿಕ ಸಂಕಷ್ಟದಿಂದ ನಿರ್ಮಾಪಕರು ಹಿಂದೆ ಸರಿದರು. ಹೀಗಾಗಿ ಸಿನಿಮಾ ನಿಧಾನವಾಯಿತು. ಮೊದಲ ಸಿನಿಮಾ ‘ಕುಮಾರಿ’ ಹೆಚ್ಚು ಯಶಸ್ವಿಯಾಗಲಿಲ್ಲ. ಹೀಗಾಗಿ ನಟನಾಗಿ ಯಾರೂ ನನ್ನ ಕೆಲಸ ನೋಡಿರಲಿಲ್ಲ. ‘ವೈರಂ’ ಬಿಡುಗಡೆಯಾಗಿದ್ದರೆ ನಿರ್ಮಾಪಕರಿಗೆ ಹೀಗೊಬ್ಬ ನಟ ಇದ್ದಾನೆ ಎಂಬುದು ಬಹುಶಃ ತಿಳಿಯುತ್ತಿತ್ತು. ಆ ಕಾರಣದಿಂದ ಅವಕಾಶಗಳು ಬರಲಿಲ್ಲ. ಒಂದಷ್ಟು ಕಥೆಗಳನ್ನು ಕೇಳಿದ್ದೆ. ಆದರೆ ನನಗೆ ಕಥೆಗಳು ಇಷ್ಟವಾಗಲಿಲ್ಲ. ನನ್ನ ನಟನೆ ಸಾಮರ್ಥ್ಯ ತೋರಿಸಲು ಗಟ್ಟಿಯಾದ ಸ್ಕ್ರಿಪ್ಟ್‌ ಬೇಕಿತ್ತು. ಜತೆಗೊಂದು ಪ್ರಬಲವಾದ ತಂಡ ಎದುರು ನೋಡುತ್ತಿದ್ದೆ. ಆಗ ‘S\O ಮುತ್ತಣ್ಣ’ ಚಿತ್ರತಂಡ ನನಗೆ ಲಭಿಸಿತು. ಒಂದೊಳ್ಳೆ ಚಿತ್ರದೊಂದಿಗೆ ಮತ್ತೆ ಬಂದಿರುವೆ ಎಂಬ ಖುಷಿಯಿದೆ’ ಎಂಬುದು ಅವರ ಮನದಾಳದ ಮಾತು. 

‘ರಂಗಾಯಣ ರಘು ಸರ್‌ ಅಂಥ ನಟರಿದ್ದಾರೆ ಎಂದಾಗ ನಮಗೂ ಈ ರೀತಿ ಒಂದು ಸಿನಿಮಾ ಮಾಡಬಹುದೆಂಬ ಆತ್ಮವಿಶ್ವಾಸ ಬರುತ್ತದೆ. ನಾವು ಇವತ್ತು ಡಿಜಿಟಲ್‌, ಒಟಿಟಿಗೆ ಚಿತ್ರ ಮಾರಬೇಕು ಎಂದರೆ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಲೇಬೇಕು. ಈ ರೀತಿ ಪರಿಸ್ಥಿತಿಯಲ್ಲಿ ಸಿನಿಮಾ ಚೆನ್ನಾಗಿರಬೇಕು. ‘ಎಕ್ಕ’, ‘ಜೂನಿಯರ್‌’ಗೆ ಜನ ತುಂಬುತ್ತಿದ್ದಾರೆ. ಬಹಳ ಖುಷಿಯಾಗುತ್ತಿದೆ. ಹೊಸಬರಿಗೆ ಜನ ಬರುತ್ತಿದ್ದಾರೆ ಎಂಬುದು ಸಂತಸದ ವಿಷಯ. ‘ಮಾದೇವ’ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜನ ವಾಪಾಸ್‌ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಟಿಕೆಟ್‌ ದರ ಕೂಡ ಕಡಿಮೆ ಆಗುತ್ತಿದೆ. ಹೀಗಾಗಿ ಮತ್ತೆ ಭರವಸೆ ಮೂಡಿದೆ. ಚಿತ್ರಕ್ಕೆ ಜನ ಬರದಿರಲು ಬಹಳಷ್ಟು ಕಾರಣಗಳಿವೆ. ಸಿನಿಮಾಗಳು ಒಂದೇ ಕಾರಣದಿಂದ ಸೋಲುತ್ತಿವೆ ಎಂದರೆ ಅದಕ್ಕೆ ಪರಿಹಾರ ಹುಡುಕಬಹುದು. ಆದರೆ ಸಾಕಷ್ಟು ಕಾರಣಗಳಿರುವಾಗ ನಮಗೆ ಯಾಕೆ ಚಿತ್ರ ಯಶಸ್ವಿಯಾಗಿಲ್ಲ ಎಂದು ತಿಳಿಯುವುದು ಕಷ್ಟ. ಒಳ್ಳೆ ಸಿನಿಮಾಗಳನ್ನು ಜನ ಕೈಬಿಟ್ಟಿಲ್ಲ. ಪ್ರಚಾರ ಕೂಡ ಮುಖ್ಯ. ನಮ್ಮ ಸಿನಿಮಾವನ್ನು ಉತ್ತಮ ರೀತಿಯಲ್ಲಿ ಪ್ರಚಾರ ಮಾಡುತ್ತೇವೆ. ಚಿತ್ರರಂಗದವರೂ ನಮ್ಮ ಜತೆಗೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳುತ್ತಾರೆ.

‘ಈ ಚಿತ್ರದ ಬಳಿಕ ‘ವೈರಂ’ ಬಿಡುಗಡೆಯಾಗುತ್ತಿದೆ. ‘ಮುತ್ತಣ್ಣ’ ತಂಡದ ಜತೆಯೇ ಇನ್ನೊಂದು ಚಿತ್ರವನ್ನು ಈಗಾಗಲೇ ಘೋಷಿಸಿದ್ದೇವೆ. ಸದ್ಯದಲ್ಲಿಯೇ ಈ ಚಿತ್ರವೂ ಸೆಟ್ಟೇರಲಿದೆ. ಕನ್ನಡ ಮತ್ತು ತೆಲುಗು ದ್ವಿಭಾಷಾ ಸಿನಿಮಾವೊಂದರಲ್ಲಿ ನಟಿಸುತ್ತಿದ್ದೇನೆ. ಹತ್ತು ದಿನಗಳ ಚಿತ್ರೀಕರಣ ಬಾಕಿಯಿದೆ. ಈ ಎಲ್ಲ ಸಿನಿಮಾಗಳು ತೆರೆಗೆ ಬಂದ ಬಳಿಕ ಇನ್ನಷ್ಟು ಅವಕಾಶಗಳು ಸಿಗಲಿದೆ ಎಂಬ ನಂಬಿಕೆ ಇದೆ’ ಎಂದು ಅವರು ತಮ್ಮ ಮುಂದಿನ ಯೋಜನೆಗಳ ಕುರಿತು ವಿವರಿಸಿದರು.  

ಅವಕಾಶ ಸಿಗುತ್ತಿಲ್ಲ

ಉತ್ತಮ ಚಿತ್ರಗಳನ್ನು ನೀಡಿದರೂ ತಮಗೆ ಕನ್ನಡದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ ಎಂದು ಚಿತ್ರದ ನಾಯಕಿ ಖುಷಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ.

‘ದಿಯಾ’ ಬಹಳ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಅಯ್ಯನ ಮನೆ’ ವೆಬ್‌ ಸರಣಿಗೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ನಮ್ಮಲ್ಲಿ ಹೆಚ್ಚು ಅವಕಾಶಗಳಿಲ್ಲ. ಯಾಕೆ ಎಂದು ಬಹಳ ಯೋಚಿಸುತ್ತಿರುವೆ. ನನಗೆ ಅಂತಲ್ಲ ಬಹಳಷ್ಟು ಉತ್ತಮ ನಟರಿಗೆ ಈ ಅನುಭವ ಆಗುತ್ತಿದೆ. ಮೊದಲು ಒಂದಷ್ಟು ಕಥೆ ಬರುತ್ತಿತ್ತು. ಆದರೆ ಅವು ನನಗೆ ಇಷ್ಟವಾಗುತ್ತಿರಲಿಲ್ಲ. ಈಗೀಗ ಚಿತ್ರತಂಡಗಳು ಕಥೆ ತೆಗೆದು ನನ್ನ ಬಳಿ ಬರುವುದು ಕಡಿಮೆಯಾಗಿದೆ. ಏಳು ಸಿನಿಮಾಗಳನ್ನು ಮಾಡಿದ್ದೇನೆ. ಬೇರೆ ಭಾಷೆಗಳಲ್ಲಿ ನಟಿಸುತ್ತಿರುವೆ. ಆದರೆ ಕನ್ನಡದ ಒಂದೇ ಒಂದು ಸಿನಿಮಾ ಕೂಡ ಕೈಯ್ಯಲ್ಲಿ ಇಲ್ಲ ಎಂಬುದು ಬೇಸರದ ಸಂಗತಿ’ ಎನ್ನುತ್ತಾರೆ ಖುಷಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.