ಕಳೆದೊಂದು ತಿಂಗಳಿನಿಂದ ಸ್ಯಾಂಡಲ್ವುಡ್ನಲ್ಲಿ ವಾರಕ್ಕೆ ಆರೆಂಟು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಈ ವಾರ ಆ ಸಂಖ್ಯೆ ತಗ್ಗಿದ್ದು ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿವೆ.
ತುಳುನಾಡಿನ ಜನಪ್ರಿಯ ನಟ, ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಪುರುಷೋತ್ತಮನ ಪ್ರಸಂಗ’ ಇಂದು(ಮಾ.1) ತೆರೆ ಕಾಣುತ್ತಿದೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿ ಕುಮಾರ್ ನಿರ್ಮಿಸಿರುವ ಚಿತ್ರದಲ್ಲಿ ಅವರ ಪುತ್ರ ಅಜಯ್, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
‘ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ’ ಎನ್ನುತ್ತಾರೆ ನಾಯಕ.
ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಅರ್ಚನಾ ಕೊಟ್ಟಿಗೆ ಮುಖ್ಯಭೂಮಿಕೆಯಲ್ಲಿರುವ ‘ಜುಗಲ್ ಬಂದಿ’ ಇಂದು ತೆರೆ ಕಾಣುತ್ತಿದೆ. ದಿವಾಕರ್ ಡಿಂಡಿಮ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರವಿದು. ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ಪ್ರದ್ಯೋತ್ತನ್ ಸಂಗೀತ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ.
ದೇಶದ ಗಡಿ ಕಾಯುವ ಸೈನಿಕನ ಕಥೆ ಹೊಂದಿರುವ ‘ನಮೋ ಭಾರತ್’ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಶ್ರೀ ಚೌಡೇಶ್ವರಿ ಫಿಲ್ಮ್ಸ್ ಮೂಲಕ ರಮೇಶ್ ಎಸ್.ಪರವಿನಾಯ್ಕರ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಗೌರಿ ವೆಂಕಟೇಶ್ ಛಾಯಾಚಿತ್ರಗ್ರಹಣವಿದೆ. ಸೋನಾಲಿ ಪಂಡಿತ್, ಸುಷ್ಮಾ ರಾಜ್, ಭವ್ಯ ಮುಂತಾದವರು ಚಿತ್ರದಲ್ಲಿದ್ದಾರೆ.
ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀಮತಿ ನಂದ ಎಂ.ಆರ್. ಅವರು ನಿರ್ಮಿಸಿ, ನೃತ್ಯನಿರ್ದೇಶಕ ಜಗ್ಗು ಆ್ಯಕ್ಷನ್ ಕಟ್ ಹೇಳಿರುವ ‘ಛಾಯಾ’ ಇಂದು ತೆರೆ ಕಾಣುತ್ತಿದೆ. ಹಾರರ್ ಕಥೆಯುಳ್ಳ ಚಿತ್ರಕ್ಕೆ ಮಂಜು ಕವಿ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಿದೆ. ವೀನಸ್ ನಾಗರಾಜ ಮೂರ್ತಿ ಛಾಯಾಚಿತ್ರಗ್ರಹಣ, ದುರ್ಗಾ ಪಿ.ಎಸ್.ಅವರ ಸಂಕಲನವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.