2008ರಲ್ಲಿ ಬಿಡುಗಡೆಯಾಗಿದ್ದ ‘ಗಾಳಿಪಟ’ ಸಿನಿಮಾ, ಯೋಗರಾಜ ಭಟ್ಟರ ಯಶಸ್ವಿ ಸಿನಿಮಾಗಳಲ್ಲೊಂದು. ಗಣೇಶ್, ರಾಜೇಶ್ ಕೃಷ್ಣನ್ ಮತ್ತು ದಿಗಂತ್ ನಾಯಕರಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಡೈಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ನಾಯಕಿಯರಾಗಿ ನಟಿಸಿದ್ದರು.
ದಶಕದ ನಂತರ ಭಟ್ಟರು ಮತ್ತೊಮ್ಮೆ ಗಾಳಿಪಟದ ಸೂತ್ರ ಹಿಡಿಯಲು ಸಜ್ಜಾಗಿದ್ದಾರೆ. ‘ಗಾಳಿಪಟ 2’ ಸಿನಿಮಾವನ್ನು ಯೋಗರಾಜ ಭಟ್ ಅವರೇ ನಿರ್ದೇಶಿಸುತ್ತಿದ್ದು, ಶರಣ್, ರಿಷಿ, ಪವನ್ ಕುಮಾರ್ ನಾಯಕರಾಗಿ ನಟಿಸಲಿದ್ದಾರೆ.
ಯಶಸ್ಸಿನ ಬಾನಿನಲ್ಲಿ ಜೋರಾಗಿಯೇ ಹಾರಾಡಿದ ಹಳೆಯ ಸಿನಿಮಾದ ಹೆಸರನ್ನಷ್ಟೇ ಅವರು ಈ ಸಿನಿಮಾಗೆ ಬಳಸಿಕೊಳ್ಳುತ್ತಿದ್ದಾರೆ. ಹಾಗೆಂದು ಇದು ಹಳೆಯ ಕಥೆಯ ಮುಂದುವರಿಕೆ ಅಲ್ಲ. ಪಾತ್ರಗಳು, ಕಥೆಯ ಎಳೆ ಯಾವುದರಲ್ಲಿಯೂ ಹಿಂದಿನ ಪಟಕ್ಕೂ ಈಗಿನ ದಾರಕ್ಕೂ ಕಿಂಚಿತ್ ಹೋಲಿಕೆ ಇಲ್ಲ. ಹೊಸ ಬೆಗಡೆ, ಹೊಸ ಕಡ್ಡಿ, ಹೊಸ ದಾರಗಳನ್ನೇ ಇಟ್ಟುಕೊಂಡು ಬಾನಿಗೆ ತೂರಿಬಿಡಲು ಅವರು ಸಿದ್ಧರಾಗಿದ್ದಾರೆ.
ಎಷ್ಟು ಹೊಸತು ಎಂದರೂ ಭಟ್ಟರ ಸಿನಿಮಾಗೆ ಕೆಲವು ಟ್ರೇಡ್ಮಾರ್ಕ್ಗಳು ಇರುತ್ತವಲ್ಲವೇ? ಅದು ಹೇಗೆ ಬದಲಾಗಲು ಸಾಧ್ಯ? ಹರೆಯದವರ ಎದೆಗೆ ಕೊಳ್ಳಿ ಇಡುವ ಕಥೆ, ಕಣ್ಮನ ತಣಿಸುವ ಲೊಕೆಶನ್ಗಳು, ತುಟಿಗಳಲ್ಲಿ ನಗುವನ್ನೂ, ಕಣ್ಣುಗಳಲ್ಲಿ ನೀರನ್ನೂ ಒಟ್ಟೊಟ್ಟಿಗೇ ತರಿಸುವ ಚುರುಕು ಡೈಲಾಗ್ಗಳು ಎಲ್ಲವೂ ಗಾಳಿಪಟದ ಬಣ್ಣಗಳಾಗಲಿವೆ.
ಮಹೇಶ್ ದನನ್ನಾವರ್ ಎನ್ನುವವರು ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹೊಸೆಯಲು ಸಜ್ಜಾಗಿದ್ದಾರೆ. ಸದ್ಯಕ್ಕೆ ‘ಪಂಚತಂತ್ರ’ ಚಿತ್ರದ ಬಿಡುಗಡೆ–ಪ್ರಚಾರ ಕೆಲಸದಲ್ಲಿ ಮಗ್ನರಾಗಿರುವ ಅವರು, ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರದ ಒಂದಿಷ್ಟು ಭಾಗವನ್ನು ವಿದೇಶದಲ್ಲಿ ಚಿತ್ರೀಕರಿಸುವ ಯೋಜನೆಯೂ ಅವರಿಗಿದೆ.
–––
ಕೃಪೆ: ಸುಧಾ, ಜ.31ರಸಂಚಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.